LATEST NEWS
ಕೆಪಿಟಿ ನಂತೂರು ಬಳಿ ಮರಗಳ ಮಾರಣಹೋಮ – ಪರಿಸರವಾದಿಗಳ ಪ್ರತಿಭಟನೆ
ಮಂಗಳೂರು ಅಕ್ಟೋಬರ್ 03 : ನಗರದ ಕೆಪಿಟಿ ಹಾಗೂ ನಂತೂರು ಜಂಕ್ಷನ್ಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿ ಸಲುವಾಗಿ ಹೆದ್ದಾರಿ ಬದಿಯ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪರಿಸರವಾದಿಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ವಿವಿಧ ಪರಿಸರ ಸಂಘಟನೆಯ ಕಾರ್ಯಕರ್ತರು ಪದವು ಹೈಸ್ಕೂಲ್ ಬಳಿ ಮರಗಳನ್ನು ಕಡಿಯುತ್ತಿರುವ ಪ್ರದೇಶದ ಬಳಿ ನಿಂತು ಪ್ರತಿಭಟನೆ ನಡೆಸಿದರು. ವಿವಿಧ ಪರಿಸರ ಸಂಘಟನೆಗಳ ಆಕ್ಷೇಪದ ಹೊರತಾಗಿಯೂ ಹೆದ್ದಾರಿ ಪಕ್ಕದ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ. ಈ ಕಾಮಗಾರಿಯಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ ನಡೆಸುವಂತೆ ಒತ್ತಾಯಿಸಿದರೂ ಕಿವಿಗೊಟ್ಟಿಲ್ಲ. ಈಗ ಇರುವ ಮರಗಳನ್ನು ಕಡಿಯುವ ಬದಲು ಅದನ್ನು ಶಿಫ್ಟ್ ಮಾಡಿ ಅಂದರು ಕೂಡ ಯಾವುದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತಕ್ಕೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದೆಯೇ’ ಎಂದು ಪರಿಸರ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಪರಿಸರವಾದಿಗಳು, ಕಡಿದ ಮರಕ್ಕೆ ಶವ ಸಂಸ್ಕಾರ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆ ವೇಳೆ ವಿವಿಧ ಶಾಲಾ ವಿಧ್ಯಾರ್ಥಿಗಳು ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.
You must be logged in to post a comment Login