LATEST NEWS
ಪ್ರತಿಭಟನೆ ಕರೆ ಬೆನ್ನಲ್ಲೇ ಇಂದ್ರಾಳಿ ರೈಲ್ವೆ ಮೇಲ್ಸೆತುವೆ ಕಾಮಗಾರಿಯನ್ನು ಮತ್ತೊಮ್ಮೆ ಪರಿಶೀಲಿಸಿದ ಸಂಸದ ಕೋಟ

ಉಡುಪಿ ಮಾರ್ಚ್ 31: ಉಡುಪಿ ಜಿಲ್ಲಾಧಿಕಾರಿಯಿಂದ ಹಿಡಿದು ಸಂಸದ, ಶಾಸಕರು ವಾರ್ನಿಂಗ್ ಮಾಡಿದರೂ ಇಂದ್ರಾಳಿ ಮೇಲ್ಸೆತುವ ಕಾಮಗಾರಿ ಕುಂಟುತ್ತಲೇ ಸಾಗಿದೆ. ಈಗಾಗಲೇ ನಾಲ್ಕೈದು ಬಾರಿ ಗಡುವು ನೀಡಿದರೂ ಕೂಡ ಕಾಮಗಾರಿ ಈ ಮಳೆಗಾಲದ ವೇಳೆಗೆ ಸಂಪೂರ್ಣವಾಗುವುದು ಕಷ್ಟ ಸಾದ್ಯವಿದೆ. ಈ ನಡುವೆ ರೈಲ್ವೆ ಸೇತುವೆ ನಿರ್ಮಾಣ ಕಾರ್ಯವು ಬಹಳ ವಿಳಂಬವಾಗಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆ ಕೆಲವು ಸಾಮಾಜಿಕ ಸಂಘಟನೆಗಳು ಏಪ್ರಿಲ್ 1 ರಂದು ಏಪ್ರಿಲ್ ಫೂಲ್ ದಿನವೆಂದು ಗುರುತಿಸಿ ಪ್ರತಿಭಟನೆ ನಡೆಸಲು ಯೋಜಿಸಿದ್ದವು.
ಈ ಪ್ರತಿಭಟನೆ ನಡೆಸಲು ಯೋಜಿಸುವ ವಿಚಾರವಾಗಿ ಮಾತನಾಡಿದ ಅವರು, “ನಾನು ಈ ಸ್ಥಳಕ್ಕೆ ಎಂಟು-ಒಂಬತ್ತು ಬಾರಿ ತಪಾಸಣೆಗಾಗಿ ಭೇಟಿ ನೀಡಿದ್ದೇನೆ. ನಾನು ಸಂಸದನಾದ ನಂತರ ಈ ಯೋಜನೆ ವೇಗ ಪಡೆದುಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ಸ್ವೀಕಾರಾರ್ಹ, ಆದರೆ ಅವು ಸತ್ಯವನ್ನು ತಿರುಚಬಾರದು. ಕಾಂಗ್ರೆಸ್ ನಾಯಕರ ಇಂತಹ ಕ್ರಮಗಳು ಸೂಕ್ತವಲ್ಲ. ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ‘ಏಪ್ರಿಲ್ ಫೂಲ್’ ಪ್ರತಿಭಟನೆಯಿಂದ ಅದನ್ನು ಅಪಹಾಸ್ಯ ಮಾಡಲು ಪ್ರಯತ್ನಿಸುವುದು ನ್ಯಾಯಸಮ್ಮತವಲ್ಲ” ಎಂದು ಹೇಳಿದರು.

ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ನಾನು ಸಂಸದನಾದ ಬಳಿಕ ಸಾಕಷ್ಟು ವೇಗ ಕೊಡುವ ಪ್ರಯತ್ನ ಮಾಡಿದ್ದೇನೆ. ಈ ಕಾಮಗಾರಿಯ ವಿಳಂಬ ನೀತಿ ಅನುಸರಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇ ನಾವು. ಈ ಸಂಬಂಧ ರೈಲ್ವೆ ಸಚಿವರನ್ನು ಭೇಟಿಯಾಗಿ ಸಂಬಂಧಿಸಿದ ಅಧಿಕಾರಿಗಳ ಬಳಿ ಮಾತುಕತೆ ನಡೆಸಿ ಕಾಮಗಾರಿಗೆ ವೇಗ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಬರುತ್ತಿದ್ದೇನೆ. ಇದು ಕೊಂಕಣ ರೈಲ್ವೆಗೆ ಸೇರಿದ ವಲಯ ಆಗಿರುವುದರಿಂದ ಸ್ವಾಭಾವಿಕವಾಗಿ ಇತರೆಡೆಯಿಂದ ಸಹಕಾರ ದೊರಕದು. ಆದರೆ ಉನ್ನತ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಅಗತ್ಯವಿರುವ ಸಲಕರಣೆಗಳನ್ನು ಭಾರತೀಯ ನೈರುತ್ಯ ರೈಲ್ವೆ ಇಲಾಖೆಯಿಂದ ತರಿಸಿಕೊಳ್ಳುವ ಕೆಲಸ ಮಾಡಿಸಿದ್ದೇನೆ. ಇಂತಹಾ ಪ್ರಕರಣ ದೇಶದಲ್ಲೇ ಮೊದಲು. ಸಾಧ್ಯವಾದಷ್ಟು ಕಾಮಗಾರಿ ವೀಕ್ಷಣೆಗೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಇಷ್ಟೆಲ್ಲಾ ಕೆಲಸ ಮಾಡಿ ಇನ್ನೇನು ಸ್ವಲ್ಪ ದಿನಗಳಲ್ಲಿ ಕಾಮಗಾರಿ ಮುಕ್ತಾಯ ಆಗಲಿದೆ ಎನ್ನುವಾಗ ಕೆಲವರು ಶೋಭೆಯಲ್ಲದ ಶೀರ್ಷಿಕೆಯಡಿ ಪ್ರತಿಭಟನೆಗೆ ಮುಂದಾಗಿದ್ದಾರಂತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸಲು, ಟೀಕಿಸಲು ಹಕ್ಕಿದೆ. ಆದರೆ ಆ ಟೀಕೆಗಳು ಸತ್ಯಕ್ಕೆ ಅಪಚಾರ ಆಗದಂತಿರಲಿ. ಈಗಾಗಲೇ ಕಾಮಗಾರಿ ವೀಕ್ಷಣೆ ಮಾಡಿದ್ದೇನೆ,ಕೆಲವೇ ದಿನಗಳಲ್ಲಿ ಅಂತಿಮ ಹಂತದ ಕಾಮಗಾರಿ ವೀಕ್ಷಣೆಗೆ ಆಗಮಿಸುತ್ತೇನೆ ಎಂದರು.