Connect with us

KARNATAKA

ಕೊಪ್ಪಳ: ಮಲಗಿದ ಸ್ಥಿತಿಯಲ್ಲೇ ಹೆಣವಾದ ಪ್ರೇಮಿಗಳು!

ಕೊಪ್ಪಳ, ಜನವರಿ 15: ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಮನೆಯೊಂದರಲ್ಲಿ ಚಾಪೆ ಮೇಲೆ ಮಲಗಿದ ಸ್ಥಿತಿಯಲ್ಲೇ ರಕ್ತದ ಮಡುವಿನಲ್ಲಿ ಯುವಕ ಮತ್ತು ಯುವತಿ ಶವ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

ಬಳಿಗೇರಿ ಗ್ರಾಮದ ಸುಮಾ ಮತ್ತು ಪ್ರಕಾಶ ಭಜಂತ್ರಿ ಮೃತ ದುರ್ದೈವಿಗಳು. ಶನಿವಾರ ಮಧ್ಯಾಹ್ನ ಇವರಿಬ್ಬರೂ ದುರಂತ ಅಂತ್ಯ ಕಂಡಿದ್ದಾರೆ. ಪ್ರೀತಿ ಮಾಡುವಂತೆ ಸುಮಾಳ ಹಿಂದೆ ಪ್ರಕಾಶ ಭಜಂತ್ರಿ ದುಂಬಾಲು ಬಿದ್ದಿದ್ದ. ಈ ವಿಷಯ ಹುಡುಗಿ ಮನೆಯವರಿಗೂ ತಿಳಿದಿತ್ತು. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಗ್ರಾಮದಲ್ಲಿ ರಾಜಿ ಸಂಧಾನ ಕೂಡ ನಡೆದಿತ್ತು ಎನ್ನಲಾಗಿದೆ. ಮನೆಯಲ್ಲಿ ಒಪ್ಪದ ಹಿನ್ನೆಲೆ ಸುಮಾ ಪ್ರೀತಿಯನ್ನ ನಿರಾಕರಿಸಿದ್ದಳು. ಇದಕ್ಕೆ ಕೋಪಗೊಂಡ ಪ್ರಕಾಶ, ಇಂದು ಮಧ್ಯಾಹ್ನ ಯಾರೂ ಇಲ್ಲದ ವೇಳೆ ಸುಮಾಳ ಮನೆಗೆ ಆಗಮಿಸಿ, ಆಕೆಯನ್ನ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಆದರೆ, ಯುವಕನ ಕುಟುಂಬಸ್ಥರು ಮಾತ್ರ ಪ್ರೀತಿಯ ವಿಷಯ ನಮಗೆ ತಿಳಿದೇ ಇರಲಿಲ್ಲ. ಯಾವ ರಾಜಿ ಸಂಧಾನವೂ ಆಗಿಲ್ಲ. ಹುಡುಗಿಯ ಮನೆಯವರೇ ನಮ್ಮ ಹುಡುಗನಿಗೆ ಮೋಸ ಮಾಡಿ ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ. ಓದುವ ವಯಸ್ಸಲ್ಲಿ ಇವರಿಬ್ಬರೂ ಪ್ರೀತಿ ಬಲೆಗೆ ಸಿಲುಕಿ ಮನೆಯವರ ವಿರೋಧಕ್ಕೆ ಬೇಸತ್ತು ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡರೇ? ಅಥವಾ ಪ್ರೀತಿ ನಿರಾಕರಿಸಿದಳು ಎನ್ನುವ ಕಾರಣ ಬಾಲಕಿಯನ್ನ ಕೊಂದು ಬಳಿಕ ತಾನೂ ಕತ್ತುಕೊಯ್ದು ಭಗ್ನಪ್ರೇಮಿ ಮೃತಪಟ್ಟನೇ? ಅಥವಾ ಪ್ರೇಮಿಗಳನ್ನು ಬೇರೆ ಯಾರಾದರೂ ಕೊಂದರೇ? ಎಂಬಿತ್ಯಾದಿ ಅನುಮಾನ ಮೂಡಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ, ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿಸಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply