ಕೊಡಗು ಡಿಸೆಂಬರ್ 30: ಕೆಲ ದಿನಗಳ ಹಿಂದೆ ಜಮ್ಮು-ಕಾಶ್ಮೀರ ಪೂಂಚ್‌ನಲ್ಲಿ ಸೇನಾ ವಾಹನ ಪಲ್ಟಿಯಾದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಶ್ರೀನಗರದ ಉದಂಪುರ್ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಡಗಿನ ಯೋಧ ದಿವಿನ್ (28) ಭಾನುವಾರ ರಾತ್ರಿ ಹುತಾತ್ಮರಾಗಿದ್ದಾರೆ.


ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಕೊಡಗಿನ ಯೋಧ ಗಂಭೀರ ಗಾಯಗೊಂಡಿದ್ದರು. ಕೊಡಗು ಜಿಲ್ಲೆಯ‌ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮದ 28 ವರ್ಷ ಪ್ರಾಯದ ದಿವಿನ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು.

ಈ ಬಗ್ಗೆ ಅವರ ತಾಯಿಗೆ ಮಾಹಿತಿ ನೀಡಲಾಗಿತ್ತು, ಬಳಿಕ ದಿವಿನ್ ಅವರ ತಾಯಿ ಹಾಗೂ ಕುಟುಂಬಸ್ಥರು ಶುಕ್ರವಾರ ಶ್ರೀನಗರ ತೆರಳಿ ಆಸ್ಪತ್ರೆಯಲ್ಲಿ ಮಗನ ಪರಿಸ್ಥಿತಿ ಕಂಡು ದುಃಖ ಹೋರ ಹಾಕಿದ್ರು. ಈ ಸಂದರ್ಭದಲ್ಲಿ ತಾಯಿಯ ಧ್ವನಿ ಕೇಳಿ ಚಿಕಿತ್ಸೆಗೆ ಸ್ಪಂದಿಸುವ ರೀತಿಯಲ್ಲಿ ದಿವಿನ್‌ ಕಣ್ಣಿನ ರೆಪ್ಪೆ ತೆರೆದು ನೋಡಿದ್ದರಂತೆ, ಬಳಿಕ ಹಾಗೆಯೇ ಮಲಗಿದ್ದರಂತೆ. ಇದನ್ನು ಕಂಡ ಜಯ ಅವರು ಮಗನ ಆರೋಗ್ಯದಲ್ಲಿ ಸ್ವಲ್ಪ ಚೇತರಿಗೆ ಆಗುತ್ತಿದೆ ಎಂದು ಸಮಾಧಾನಪಟ್ಟುಕೊಂಡಿದ್ದರು. ಆದರೆ ಶ್ವಾಸಕೋಶದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಿವಿನ್‌ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

Share Information