LATEST NEWS
ಕರ್ಣಾಟಕ ಬ್ಯಾಂಕ್ ಆರ್ಥಿಕ ಸ್ಥಿತಿ ಸದೃಢ – ವದಂತಿಗೆ ಗ್ರಾಹಕರು ಕಿವಿಗೊಡಬಾರದು

ಮಂಗಳೂರು ಜುಲೈ 01: ಕರ್ಣಾಟಕ ಬ್ಯಾಂಕ್ ನ ಸಿಇಓ ಮತ್ತು ಇಡಿ ರಾಜೀನಾಮೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಕ್ ನ ಆರ್ಥಿಕ ಸ್ಥಿತಿ ಕುರಿತಂತೆ ಸುದ್ದಿಗಳು ಹರಿದಾಡುತ್ತಿದ್ದು, ಈ ಕುರಿತಂತೆ ಬ್ಯಾಂಕ್ ನ ಗ್ರಾಹಕರು ಯಾವುದೇ ಗೊಂದಲಗಳಿಗೆ ಒಳಗಾಗಬಾರದು , ಸತತ ಲಾಭದಲ್ಲಿ ವ್ಯವಹಾರ ಮಾಡುತ್ತಿರುವ ಕರ್ಣಾಟಕ ಬ್ಯಾಂಕ್ ಸುಭದ್ರವಾಗಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ,
ಕರ್ಣಾಟಕ ಬ್ಯಾಂಕ್ ನ ಸಿಇಓ ಶ್ರೀಕೃಷ್ಣನ್ ಮತ್ತು ಇಡಿ ಶೇಖರ್ ರಾವ್ ಅವರು ರಾಜೀನಾಮೆ ನೀಡಿದ್ದರು. ಬ್ಯಾಂಕ್ ನ ಆಡಳಿತ ಮಂಡಳಿ ಜೊತೆಗಿನ ಮನಸ್ತಾಪ ಇಬ್ಬರ ರಾಜೀನಾಮೆಗೆ ಕಾರಣ ಎಂದು ಹೇಳಲಾಗಿದೆ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಬ್ಯಾಂಕ್ ಸ್ಪಷ್ಟನೆ ನೀಡಿದೆ. ಠೇವಣಿದಾರರ ಹಣದ ಸುರಕ್ಷತೆ ಮತ್ತು ಭದ್ರತೆಯೇ ನಮ್ಮ ಬ್ಯಾಂಕ್ನ ಆದ್ಯತೆಯಾಗಿದ್ದು, 101 ವರ್ಷಗಳಿಂದ ಇದನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಬ್ಯಾಂಕ್ ಬಗ್ಗೆ ಪ್ರಕಟವಾಗಿರುವ ಸುದ್ದಿ ದುರುದ್ದೇಶದಿಂದ ಕೂಡಿದ್ದು, ಗ್ರಾಹಕರ ಮನಸ್ಸಿನಲ್ಲಿ ಆತಂಕ ಸೃಷ್ಟಿಸುವ ಯತ್ನ ಮಾಡಲಾಗಿದೆ. ಗ್ರಾಹಕರು ಇದಕ್ಕೆ ಕಿವಿಗೊಡಬಾರದು’ ಎಂದು ಮುಖ್ಯ ವ್ಯವಸ್ಥಾಪಕಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಪಲ್ಲವಿ ಟಿ.ಎಸ್ ತಿಳಿಸಿದ್ದಾರೆ.

ಕರ್ಣಾಟಕ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದ್ದು, ಯಾವುದೇ ಹಣಕಾಸಿನ ಹಗರಣಗಳು ನಡೆದಿಲ್ಲ. ಗ್ರಾಹಕರು ಮತ್ತು ಠೇವಣಿದಾರರು ಆತಂಕಪಡುವ ಅಗತ್ಯವಿಲ್ಲ’ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಹೇಳಿದ್ದಾರೆ. 101 ವರ್ಷಗಳ ಇತಿಹಾಸ ಇರುವ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿದ್ದು, ಬ್ಯಾಂಕ್ ವಹಿವಾಟು ₹1.82 ಲಕ್ಷ ಕೋಟಿಗೂ ಮಿಕ್ಕಿ ಇದೆ. ದೇಶದಲ್ಲಿ 950 ಶಾಖೆಗಳು ಇದ್ದು, 9,000 ಸಿಬ್ಬಂದಿ ಹೊಂದಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.