Connect with us

    LATEST NEWS

    ‘ಕಾಂತಾರ 2’ ಗೆ ಆರಂಭದಲ್ಲೇ ವಿಘ್ನ,#SaveTulunadಅಭಿಯಾನ ‘ಹಣ,ಹೆಸರು ಮಾಡಲು ಭೂತಾರಾಧನೆ ಬಳಸಬೇಡಿ’..!

    ಕಾಂತಾರ ಸಿನಿಮಾದಲ್ಲಿ ಭೂತಾರಾಧನೆ, ಗುಳಿಗ ದೈವ, ಪಂಜುರ್ಲಿ ದೈವದ ಜತೆಗೆ ತುಳುನಾಡ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ, ಸಿನಿಮಾ ರೂಪ ಕೊಟ್ಟಿದ್ದ ರಿಷಬ್‌ ಶೆಟ್ಟಿಗೆ ಇದೇ ಭಾಗದ ಮಂದಿಯಿಂದಲೇ ಪ್ರಶಂಸೆ ಸಿಕ್ಕಿತ್ತು. ಆದರೆ ಇದೀಗ ಇದೇ ಜನ ರಿಷಬ್‌ ಶೆಟ್ಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಮಂಗಳೂರು : ತುಳುನಾಡಿನ ದೈವಾರಾಧನೆಯನ್ನು ಮುಂದಿಟ್ಟು ಮಾಡಿದ್ದ ಕಾಂತಾರ ಸಿನಿಮಾ ದೇಶ ವಿದೇಶಗಳಲ್ಲಿ ಯಶಸ್ಸು ಗಳಿಸಿ ಕೋಟಿಗಟ್ಟಲೆ ಹಣ ಬಾಚಿ ದಾಖಲೆ ನಿರ್ಮಾಣ ಮಾಡಿದ್ದು ಇತಿಹಾಸ.

    ಕಾಂತಾರ ಸಿನಿಮಾದಲ್ಲಿ ಭೂತಾರಾಧನೆ, ಗುಳಿಗ ದೈವ, ಪಂಜುರ್ಲಿ ದೈವದ ಜತೆಗೆ ತುಳುನಾಡ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ, ಸಿನಿಮಾ ರೂಪ ಕೊಟ್ಟಿದ್ದ ರಿಷಬ್‌ ಶೆಟ್ಟಿಗೆ ಇದೇ ಭಾಗದ ಮಂದಿಯಿಂದಲೇ ಪ್ರಶಂಸೆ ಸಿಕ್ಕಿತ್ತು. ಆದರೆ ಇದೀಗ ಇದೇ ಜನ ರಿಷಬ್‌ ಶೆಟ್ಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂತಾರದ ಎರಡನೇ ಭಾಗ ತೆರೆಗೆ ತರಲು ಚಿತ್ರ ತಂಡ ಯೋಜನೆ ರೂಪಿಸಿದ್ದು ಈಗಾಗಲೇ ಮೂಹೂರ್ತವಾಗಿ ಸಿನಿಮಾ ಶೂಟಿಂಗ್ ಆರಂಭಗೊಂಡಿದೆ. ಆದ್ರೆ ಭೂತಾರಾಧನೆ, ದೈವಾರಾಧಾನೆಯನ್ನು ಶತಮಾನಗಳಿಂದ ಭಕ್ತಿ ಶೃದ್ದೆಯಿಂದ ಆರಾಧಿಸಿ, ಪೂಜಿಸಿಕೊಂಡು ಬರುತ್ತಿರುವ ತುಳುನಾಡಿನಲ್ಲಿ ಕಾಂತಾರ ಸಿನೆಮಾದ 2 ನೇ ಭಾಗಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

    ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಅಭಿಯಾನ ಆರಂಭಿಸಿ ಸಿನಿಮಾ ಶೂಟಿಂಗ್ ನಿಲ್ಲಿಸುವಂತೆ ಹೊಂಬಾಳೆ ಫಿಲಂಸ್‌ ಅನ್ನು ಆಗ್ರಹಿಸಿದ್ದಾರೆ ಮಾತ್ರವಲ್ಲ ಚಿತ್ರದ ನಿರ್ದೇಶಕ ಮತ್ತು ಕಲಾವಿದ ರಿಷಬ್ ಶೆಟ್ಟಿಯನ್ನು ತರಾಟೆಗೆತಗೊಂಡಿದ್ದಾರೆ. ಕಾಂತಾರದಿಂದ ಭೂತಾರಾಧನೆ ಬೀದಿಗೆ ತಂದಿದ್ದೀರಿ,ಅನಾದಿ ಕಾಲದಿಂದ ಕಾಪಾಡಿಕೊಂಡು ಬಂದ ತುಳುನಾಡಿನ ಭೂತಾರಾಧನೆಯನ್ನು ಈ ರೀತಿ ಬೀದಿಗೆ ತಂದು ಪ್ರದರ್ಶನದ ವಸ್ತುಮಾಡಿ,ಅಪಹಾಸ್ಯ ಮಾಡಿ ಅದರ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದೀರಿ ಎಂದು ಎಂದು ಆಕೋಶ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ದೈವದ ಹೆಸರಲ್ಲಿನ ಅಪಹಾಸ್ಯ ನಡೆಯುತ್ತಿದೆ. ಸಿಕ್ಕ ಸಿಕ್ಕಲ್ಲಿ ದೈವದ ಪ್ರತಿಮೆ ಮಾಡಿ ಭೂತಾರಾಧನೆಯನ್ನು ಬೀದಿಗೆ ತಂದಿದ್ದಾರೆ. ಇದೆಲ್ಲದಕ್ಕೂ ಕಾಂತಾರ ಚಿತ್ರವೇ ಕಾರಣ, ಅದರಿಂದಲೇ ಈ ವಿಕೃತಿ ನಡೆಯುತ್ತಿದೆ ಎಂದು ತುಳುನಾಡಿನ ಜನರ ಆಕ್ರೋಶ ಭರಿತ ಮಾತುಗಳನ್ನು ಆಡುತ್ತಿದ್ದಾರೆ. ಇದೆಲ್ಲವೂ ರಿಷಬ್‌ ಶೆಟ್ಟಿ ಅವರಿಂದ ಆಗಿದ್ದು ಎಂದು ಆರೋಪಿಸಿದ್ದಲ್ಲದೆ, ಹಣ ಮತ್ತು ಹೆಸರು ಮಾಡಲು ಭೂತಾರಾಧನೆಯನ್ನು ಬಳಸಬೇಡಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ತುಳು ಭಾಷಿಕರೇ #SaveTulunad ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಇದರ ಮೂಲಕ ರಿಷಬ್‌ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್‌ ಅವರಿಗೆ ಒಂದಷ್ಟು ಪ್ರಶ್ನೆಯನ್ನೂ ಕೇಳಿದ್ದಾರೆ. ಅಷ್ಟೇ ಅಲ್ಲ, ರಿಷಬ್‌ ಶೆಟ್ಟಿಗೆ ತರಾಟೆಯನ್ನೂ ತೆಗೆದುಕೊಂಡಿದ್ದಾರೆ. ತುಳುವ ಸ್ಪೀಕ್ಸ್‌ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.


    “ಹಲೋ ರಿಷಬ್‌ ಶೆಟ್ಟಿ ಹೊಂಬಾಳೆ ಫಿಲಂಸ್..‌ ಕಾಂತಾರ ಚಿತ್ರ ಮಾಡಿ ಅನಾದಿ ಕಾಲದಿಂದ ಕಾಪಾಡಿಕೊಂಡು ಬಂದಿದ್ದ ತುಳುನಾಡಿನ ಭೂತಾರಾಧನೆಯನ್ನು ಈ ರೀತಿ ಬೀದಿಗೆ ತಂದು ಪ್ರದರ್ಶನ ವಸ್ತು ಮಾಡಿ, ಅಪಹಾಸ್ಯ ಮಾಡಿ, ಅದರ ಪಾವಿತ್ರ್ಯತೆಯನ್ನು ಹಾಳು ಮಾಡಲು ಕಾರಣರಾಗಿದ್ದೀರಿ” ಎಂದು ನೆಟ್ಟಿಗರು ರಿಷಬ್ ಶೆಟ್ಟಿ ತಂಡವನ್ನು ತರಾಟೆಗೆ ತಗೊಂಡಿದ್ದಾರೆ.”ದಯವಿಟ್ಟು ಹಣ ಮತ್ತು ಹೆಸರು ಮಾಡಲು ಭೂತಾರಾಧನೆ ಬಳಸಬೇಡಿ! ಬೇರೆ ಕಥಾವಸ್ತುಗಳನ್ನು ಬಳಸಿ. ಕೇವಲ ನೀವು ಆ ಭಾಗವದವರು ಎಂಬ ಕಾರಣಕ್ಕೆ ದೈವಾರಾಧನೆಯನ್ನು ನೀವು ಗುತ್ತಿಗೆ ಪಡೆದುಕೊಂಡಿಲ್ಲ.. ಈ ಚಿತ್ರದಿಂದ ಪ್ರಚಾರ ಸಿಗುತ್ತದೆ ಎಂದರೆ, ದೈವಗಳಿಗೆ ನಿಮ್ಮ ಪ್ರಚಾರದ ಅಗತ್ಯವೂ ಇಲ್ಲ. ಅವುಗಳಿಗೆ ಕಾರ್ಣಿಕ ತೋರಿಸಲು ಅವರದ್ದೇ ಶಕ್ತಿ ಇದೆ” “ನಮ್ಮ ಜನರು ಹೀಗೆಯೇ. ಇದನ್ನು ಬಡವ ಮಾಡಿದ್ರೆ ಬಿಡ್ತಾ ಇರಲಿಲ್ಲ. ಹಣವಂತರು ಆಗಿದ್ದರೆ ಮನೆಗೆ ಬೆಂಕಿ ಹಾಕಲು ಕೂಡ ಸರಿ ಅಂತಾರೆ” ಎಂದು ತುಳು ಭಾಷೆಯಲ್ಲಿಯೂ ಬರೆದುಕೊಂಡು ಅಸಮಾಧಾನ ಹೊರಹಾಕಿದ್ದಾರೆ. ಹೀಗೆ ಹಾಕಿದ ಪೋಸ್ಟ್‌ಗೆ ಅನೇಕ ನೆಟ್ಟಿಗರು ಕೈ ಜೋಡಿಸಿ ಮುಂದಿನ ದಿನಗಳಲ್ಲಿ ಇದೊಂದು ಆಂದೋಲನ ರೂಪ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

     

    Share Information
    Advertisement
    Click to comment

    You must be logged in to post a comment Login

    Leave a Reply