KARNATAKA
ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಸೇರಿ 8 ಜನರು ಕ್ರೈಸ್ತ ಧರ್ಮದಿಂದ ಸ್ವಧರ್ಮಕ್ಕೆ

ಹೊಸದುರ್ಗ, ಅಕ್ಟೋಬರ್ 11: ಮತಾಂತರವಾಗಿದ್ದ ಹಿಂದೂ ಧರ್ಮದ ಎಂಟು ಜನರನ್ನು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮನವೊಲಿಸಿ ತಾಲೂಕಿನ ಪುಣ್ಯಕ್ಷೇತ್ರ ಶ್ರೀ ಹಾಲುರಾಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಸ್ವಧರ್ಮಕ್ಕೆ ವಾಪಸ್ ಕರೆತಂದಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಮತಾಂತರದ ಬಗ್ಗೆ ಪ್ರಸ್ತಾಪ ಮಾಡಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಸ್ವತಃ ತನ್ನ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವ ಬಗ್ಗೆ ನೋವು ತೋಡಿಕೊಂಡಿದ್ದರು. ಶಾಸಕನಾಗಿರುವ ನನ್ನ ತಾಯಿಯೇ ಮತಾಂತರ ಆದರೆ ಇನ್ನು ಸಾಮಾನ್ಯ ಜನರನ್ನು ಹೇಗೆ ಮೈಂಡ್ ವಾಷ್ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿ ಮತಾಂತರ ಮಾಡುವ ಕ್ರೈಸ್ತ ಮಿಷನರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.

ಈ ಸಮಯದಲ್ಲಿಯೇ ಕೇರಳದಲ್ಲಿ ಮತಾಂತರಗೊಂಡಿದ್ದ ತಾಲೂಕಿನ ಬಲ್ಲಾಳ ಸಮುದ್ರದ ಎಂಟು ಮಂದಿಯನ್ನು ಶಾಸಕರು, ಮನವೊಲಿಸಿ ಹಿಂದೂ ಧರ್ಮಕ್ಕೆ ತರುವ ಮೂಲಕ ಮತಾಂತರ ಕಾರ್ಯಕ್ಕೆ ಮನವೊಲಿಸುವ ಮಾರ್ಗದ ಮೂಲಕ ಸ್ವಧರ್ಮಕ್ಕೆ ತರುತ್ತಿದ್ದಾರೆ. ತಾಲೂಕಿನವರಾದ ನಾರಾಯಣಪ್ಪ, ಮಂಜಮ್ಮ, ಪ್ರದೀಪ, ಗೀತಾ, ಗೌರಮ್ಮ, ಅಣ್ಣಪ್ಪ, ಕುಸುಮಮ್ಮ ಮತ್ತು ಕುಮಾರ ಎಂಟು ಜನ ಕೇರಳದಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು.
ಸದನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರದ ಬಗ್ಗೆ ಚರ್ಚೆಯಾದ ನಂತರ ನಾರಾಯಣಪ್ಪ ಸೇರಿ ಎಂಟು ಮಂದಿ ಹಾಲು ರಾಮೇಶ್ವರ ಕ್ಷೇತ್ರದಲ್ಲಿ ಹಿಂದೂ ಧರ್ಮ ಪಾಲಿಸುವ ಮೂಲಕ ದೇವರು ಪೂಜಿಸಿ ಜೀವನ ಸಾಗಿಸುವುದಾಗಿ ತಿಳಿಸಿದರು. ಹಾಲು ರಾಮೇಶ್ವರ ಶ್ರೀ ಕ್ಷೇತ್ರದಲ್ಲಿ ಹಿಂದೂ ಧರ್ಮಕ್ಕೆ ವಾಪಸಾದ ಎಂಟು ಜನರನ್ನು ಸ್ವಾಗತಿಸಿ, ಹೆಣ್ಣು ಮಕ್ಕಳಿಗೆ ಸೀರೆ ಕುಪ್ಪಸ ನೀಡಿ ಹಿರಿಯ ತಾಯಂದಿರಿಂದ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಆಶೀರ್ವಾದ ಪಡೆದರು.
ಕ್ರೈಸ್ತ ಧರ್ಮದ ಮೇಲೆ ನನಗೆ ಅಪಾರ ಗೌರವವಿದೆ. ಮತಾಂತರ ಮಾಡುವ ಕ್ರೈಸ್ತ ಮಿಷನರಿಗಳ ಮತಾಂತರ ಮಾಡುವ ಬಗ್ಗೆ ಈಗಲೂ ನನ್ನ ವಿರೋಧವಿದೆ. ಹಿಂದೂ ಧರ್ಮದ ಮುಗ್ಧ ಹಳ್ಳಿ ಜನರನ್ನು ಮತಾಂತರಗೊಳಿಸುವ ಪ್ರಕ್ರಿಯೆಗೆ ನನ್ನ ವಿರೋಧವಿದೆ ಅದು ನಿಲ್ಲಬೇಕು ಎಂದು ಗೂಳಿಹಟ್ಟಿ ಡಿ.ಶೇಖರ್ ಹೇಳಿದ್ದಾರೆ.