LATEST NEWS
ಕರ್ನಾಟಕದ ಕಾನೂನಿಗೆ ಅರೇಬಿಕ್ ನ ಜಿಹಾದ್ ಪದವೇಕೆ – ಖಾದರ್

ಮಂಗಳೂರು ಡಿಸೆಂಬರ್ 3: ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ಲವ್ ಜಿಹಾದ್ ಕಾನೂನು ವಿರುದ್ದ ಶಾಸಕ ಯು.ಟಿ ಖಾದರ್ ಕಿಡಿಕಾರಿದ್ದು, ಕರ್ನಾಟಕದಲ್ಲಿ ಜಾರಿಗೆ ಬರುವ ಕಾನೂನಿಗೆ ಅರೆಬಿಕ್ ಭಾಷೆಯ ಜಿಹಾದ್ ಎಂಬ ಹೆಸರು ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮತಾಂತರ ಕಾಯ್ದೆ ಈಗಾಗಲೇ ರಾಜ್ಯದಲ್ಲಿ ಇದೆ. ಇದಕ್ಕೆ ‘ಲವ್ ಜಿಹಾದ್’ ಎಂಬ ಹೆಸರು ಯಾಕೆ ಬೇಕು? ‘ಜಿಹಾದ್’ ಎಂಬ ಶಬ್ದದ ಬದಲು ಮತಾಂತರ ಎಂಬ ಹೆಸರನ್ನೇ ಇಡಬಹುದಿತ್ತಲ್ಲ? ಎಂದು ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದರು.

ಬಿಜೆಪಿ ಸರ್ಕಾರವು ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳುತ್ತಲ್ಲೇ ಇದ್ದು ಈವರೆಗೂ ಜಾರಿಗೆ ಬಂದಿಲ್ಲ. ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ತರಲಾಗುವುದು ಎಂದು ನಿರಂತರವಾಗಿ ಹೇಳುತ್ತಲ್ಲೇ ಇರುವ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಖಾದರ್, ”ಎಪಿಎಂಸಿ ಕಾನೂನು ರಾತ್ರಿ ಬೆಳಗಾಗುವುದರೊಳಗೆ ತಂದಿದ್ದೀರಿ. ನಿಮಗೆ ಎಲ್ಲಾ ಕಾನೂನನ್ನು ರಾತ್ರಿ ಬೆಳಗಾಗುವುದರೊಳಗೆ ಜಾರಿಗೆ ತರಲಾಗುತ್ತದೆ. ಆದರೆ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ” ಎಂದು ಪ್ರಶ್ನಿಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇದ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರವೇ ತಂದಿದೆ. ಬಿಜೆಪಿ ಯಾವುದೇ ಜನ ಪರವಾದ ಕಾಯಿದೆಗಳನ್ನು ತರಲಿಲ್ಲ. ಜನರ ಮಧ್ಯೆ ಗೊಂದಲ ತರಲು ಇಂತಹ ಚರ್ಚೆಯನ್ನು ಆಗಾಗ್ಗೆ ಹರಿಯಬಿಡುತ್ತಾರೆ ಎಂದು ದೂರಿದರು.
ಎಲ್ಲ ಕಾನೂನು ಎಲ್ಲ ವರ್ಗದವರಿಗೂ ಅನ್ವಯ ಆಗಬೇಕು. ಅದಕ್ಕೆ ಯಾವುದೋ ಬೇರೆ ಭಾಷೆ ಹೆಸರು, ಕೆಲವೇ ಧರ್ಮವನ್ನು ಉದ್ದೇಶಿಸುವ ಅಗತ್ಯಗಳು ಇಲ್ಲ. ಕರ್ನಾಟಕದ ಕಾಯ್ದೆಗೆ ಅರೇಬಿಕ್ ಪದ ಇಡುವುದು ಯಾವ ದುರುದ್ದೇಶವನ್ನು ಹೊಂದಿದೆ? ಎಂದು ಅವರೇ ತಿಳಿಸಲಿ’ ಎಂದರು. ‘ಬಿಜೆಪಿ ಜನಪರ ಕಾಯ್ದೆಗಳನ್ನು ತರುವುದಿಲ್ಲ. ಜನರ ಮಧ್ಯೆ ಬರೀ ಗೊಂದಲ ಸೃಷ್ಟಿಸುತ್ತದೆ’ ಎಂದು ಆರೋಪಿಸಿದರು