Connect with us

    DAKSHINA KANNADA

    ದನದ ಸಾವು ಹೆಚ್ಚಿದ ಕಾವು.

    ಪುತ್ತೂರು,ಸೆಪ್ಟಂಬರ್ 15: ಸತ್ತ ದನವೊಂದು ಕೈಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಯ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಪುತ್ತೂರು ಸಂಪ್ಯ ಪೋಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು-ಸುಳ್ಯ ಹೆದ್ದಾರಿಯ ಕಾರ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ದನಕ್ಕೆ ಅಂತಿಮ ಸಂಸ್ಕಾರ ನೆರವೇರಿಸಿ ಬಳಿಕ ಅದೇ ಸ್ಥಳದಲ್ಲಿ ಮಣ್ಣು ಮಾಡಿದ್ದಾರೆ. ಸಂಪ್ಯ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ಗೋ ಸಾಗಾಟ ಹಾಗೂ ಲವ್ ಜಿಹಾದ್ ನಂತಹ ಪ್ರಕರಣಗಳು ನಡೆಯುತ್ತಿದೆ. ಸಂಪ್ಯ ಪೋಲೀಸರು ಇವುಗಳನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಇಂದು ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯೂ ನಡೆಯಲಿದೆ.ಈ ನಡುವೆಯೇ ಕಾರ್ಪಾಡಿಯಲ್ಲಿ ಪತ್ತೆಯಾದ ದನದ ಅಮಾನುಷ ಸಾಗಾಟ ಪ್ರಕರಣ ಪ್ರತಿಭಟನೆಯ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.ಸಂಪ್ಯ ಪೋಲೀಸ್ ಠಾಣೆಯ ಸಿಬ್ಬಂದಿಯೋರ್ವರ ಪ್ರಕಾರ ನಿನ್ನೆ ರಾತ್ರಿ ತಮ್ಮ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋ ಸಾಗಾಟ ನಡೆಯಲಿದೆ ಎನ್ನುವ ಮಾಹಿತಿ ಪೋಲೀಸರಿಗೆ ಬಂದಿತ್ತು. ಆ ಕಾರಣಕ್ಕಾಗಿ ಪೋಲೀಸರು ನಾಕಾಬಂಧಿಯನ್ನೂ ಮಾಡಿದ್ದರು ಎಂದಿದ್ದಾರೆ.ಆದರೆ ಸಂಪ್ಯ ಪೋಲೀಸ್ ಠಾಣೆಗೆ ಕೂಗಳತೆಯ ದೂರದಲ್ಲಿ ಗೋ ಸಾಗಾಟಗಾರರು ತಮ್ಮ ವಾಹನ ಕೆಟ್ಟು ನಿಂತಾಗ ಅದನ್ನು ಸರಿಪಡಿಸಿ ದನಗಳನ್ನು ಸಾಗಿಸುವ ತನಕ ಪೋಲೀಸರಿಗೆ ಈ ಬಗ್ಗೆ ಸುಳಿವು ಕೂಡಾ ಸಿಕ್ಕಿಲ್ಲ. ನಾಕಾಬಂಧಿ ಏರ್ಪಡಿಸಿದ್ದೆವು ಎನ್ನುವ ಪೋಲೀಸರಿಗೆ ದನವನ್ನು ಸಾಗಾಟ ಮಾಡಿದ ವಾಹನ ಮಾತ್ರ ಇದುವರೆಗೂ ಪತ್ತೆಯಾಗದಿರುವುದು ಹಲವು ಸಂಶಯಗಳಿಗೂ ಎಡೆ ಮಾಡಿಕೊಟ್ಟಿದೆ. ಪೋಲೀಸರು ನಾಕಾಬಂಧಿಗೆ ಹೆದರಿ ಗೋ ಸಾಗಾಟದ ವಾಹನ ಮಾಯವಾಗಿರಬೇಕು ಎನ್ನುವ ಕುಹಕವೂ ಇದೀಗ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ದನಗಳಗೆ ಮೇವು ನೀಡಲು ಗತಿಯಿಲ್ಲದೆ, ಗುಡ್ಡಕ್ಕೋ, ರಸ್ತೆಯ ಬದಿಗೋ ದನಗಳನ್ನು ಬಿಡುವ ಬಡಪಾಯಿ ಕುಟುಂಬಗಳ ದನಗಳನ್ನು ರಾತ್ರೋ ರಾತ್ರಿ ಸಾಗಿಸುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ರೀತಿಯ ಕಳ್ಳತನದಿಂದಾಗಿ ದನಗಳನ್ನೇ ನೆಚ್ಚಿಕೊಂಡು ಬದುಕುತ್ತಿರುವ ಸಾಕಷ್ಟು ಬಡ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದೆ. ಸರಕಾರ,ಪೋಲೀಸ್‌ ಇಲಾಖೆ ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗೋವಿನ ವಿಚಾರದಲ್ಲೇ ಕಲಹ ಆರಂಭಗೊಂಡಲ್ಲಿ ಇದಕ್ಕೆ ಸರಕಾರ ಹಾಗೂ ಪೋಲೀಸ್ ಇಲಾಖೆಯೇ ಹೊಣೆಯಾಗಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply