DAKSHINA KANNADA
ಕಾಂಗ್ರೇಸ್ ಬಂದ್ ಗೆ ಬೆಂಬಲ ನೀಡಿ ಗ್ರಾಮಪಂಚಾಯತ್ ಕಛೇರಿ ಮುಚ್ಚಿದ ಸರಕಾರಿ ಸಿಬ್ಬಂದಿಗಳು
ಕಾಂಗ್ರೇಸ್ ಬಂದ್ ಗೆ ಬೆಂಬಲ ನೀಡಿ ಗ್ರಾಮಪಂಚಾಯತ್ ಕಛೇರಿ ಮುಚ್ಚಿದ ಸರಕಾರಿ ಸಿಬ್ಬಂದಿಗಳು
ಪುತ್ತೂರು, ಸೆಪ್ಟಂಬರ್ 10 : ರಾಜಕೀಯ ಪಕ್ಷದ ಜೊತೆಗೆ ಸರಕಾರಿ ನೌಕರರೂ ಕಾಂಗ್ರೇಸ್ ಪಕ್ಷ ಕರೆ ನೀಡಿದ ಭಾರತ್ ಬಂದ್ ಗೆ ಬೆಂಬಲ ನೀಡಿದ ಘಟನೆ ನಡೆದಿದೆ.
ಕಡಬದ ನೂಜಿ ಬಾಳ್ತಿಲ ಹಾಗೂ ಬಿಳಿನೆಲೆ ಗ್ರಾಮಪಂಚಾಯತ್ ನ ಸಿಬ್ಬಂದಿಗಳು ಕಾಂಗ್ರೇಸ್ ಮುಖಂಡರು ಬಂದ್ ಮಾಡಲು ಮನವಿ ಮಾಡಿದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಗೆ ಬೀಗ ಜಡಿದು ಮನೆಗೆ ತೆರಳಿದ್ದಾರೆ.
ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೇಸ್ ಪಕ್ಷ ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನಲೆಯಲ್ಲಿ ಪಕ್ಷ ಹಾಗೂ ಇತರ ಕಾಂಗ್ರೇಸ್ ಮಿತ್ರಪಕ್ಷಗಳು ಈ ಬಂದ್ ನಲ್ಲಿ ಪಾಲ್ಗೊಂಡಿದ್ದವು.
ಕೆಲವೆಡೆ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ ಬಂದ್ ಗೆ ಬೆಂಬಲ ನೀಡಿದ ಪಕ್ಷದ ಕಾರ್ಯಕರ್ತರು ಇನ್ನು ಕೆಲವು ಕಡೆಗಳಲ್ಲಿ ಮುಚ್ಚಿಸಲು ನಿರಾಕರಿಸಿದ ಜನರೊಂದಿಗೆ ಕಿರಿಕ್ ಕೂಡಾ ಮಾಡಿದ್ದಾರೆ.
ಇದೇ ರೀತಿ ಕಾಂಗ್ರೇಸ್ ಪಕ್ಷದ ಆಡಳಿತವಿರುವ ಬಿಳಿನೆಲೆ ಹಾಗೂ ನೂಜಿಬಾಳ್ತಿಲ ಗ್ರಾಮಪಂಚಾಯತ್ ಗೆ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ತೆರಳಿದ ಕೆಲವು ಕಾಂಗ್ರೇಸ್ ಮುಖಂಡರು ಗ್ರಾಮಪಂಚಾಯತನ್ನು ಮುಚ್ಚುವಂತೆ ಮನವಿ ಮಾಡಿದರು.
ಪಕ್ಷವೊಂದರ ಮುಖಂಡರು ಮನವಿ ಮಾಡಿದರು ಎನ್ನುವ ಒಂದೇ ಕಾರಣಕ್ಕೆ ಸರಕಾರಿ ಕಛೇರಿ ಎನ್ನುವುದನ್ನೂ ಗಣನೆಗೆ ತೆಗೆದುಕೊಳ್ಳದೆ ಎರಡೂ ಪಂಚಾಯತ್ ನ ಸರಕಾರಿ ನೌಕರರು ಗ್ರಾಮಪಂಚಾಯತ್ ಗೆ ಬೀಗ ಜಡಿದು ಮನೆಗೆ ತೆರಳಿದ್ದಾರೆ.
ಅಡಿಕೆ ಕೊಳೆರೋಗದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಬಂದ ಗ್ರಾಮಸ್ಥರು ಗ್ರಾಮಪಂಚಾಯತ್ ಗೆ ಬೀಗ ಹಾಕಿರುವ ವಿಚಾರ ಆಕ್ರೋಶಿತರಾಗಿದ್ದು, ಕೂಡಲೇ ಪಂಚಾಯತ್ ಕಛೇರಿ ತೆರೆಯುವಂತೆ ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ಒತ್ತಡಕ್ಕೆ ಮಣಿದ ಬಿಳಿನೆಲೆ ಗ್ರಾಮಪಂಚಾಯತ್ ಸಿಬ್ಬಂದಿಗಳು ಮತ್ತೆ ಪಂಚಾಯತ್ ಕಛೇರಿಯನ್ನು ತೆರೆದು ಕೆಲಸ ನಿರ್ವಹಿಸಿದರೆ, ನೂಜಿಬಾಳ್ತಿಲ ಗ್ರಾಮಪಂಚಾಯತ್ ಸಿಬ್ಬಂದಿಗಳು ಮಾತ್ರ ಗ್ರಾಮಸ್ಥರು ಬರುವ ಮೊದಲೇ ಜಾಗ ಖಾಲಿ ಮಾಡಿಯಾಗಿತ್ತು.
ಪಂಚಾಯತ್ ಸಿಬ್ಬಂದಿಗಳ ಈ ನಡೆ ಇದೀಗ ಭಾರೀ ವಿವಾದಕ್ಕೂ ಕಾರಣವಾಗಿದ್ದು, ನೌಕರರ ಈ ರೀತಿಯ ವರ್ತನೆಗೆ ಭಾರೀ ವಿರೋಧವೂ ಕೇಳಿ ಬರಲಾರಂಭಿಸಿದೆ.
You must be logged in to post a comment Login