ಉಡುಪಿ ಸೆಪ್ಟೆಂಬರ್ 23: ಉಡುಪಿಯ ದೊಡ್ಡಣಗುಡ್ಡೆ ಬಬ್ಬುಸ್ವಾಮಿ ಗುಡಿಯ ಬಳಿ ಇರುವ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.

ಬೆಳಗ್ಗೆ ದೈನಂದಿನ ಕೆಲಸಕ್ಕೆ ಬರುವ ಮಹಿಳೆಯೊಬ್ಬರು ಅಡುಗೆ ಕೋಣೆಯಲ್ಲಿ ಕೆಲಸ ಪ್ರಾರಂಭಿಸುವಾಗ ಹಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದೆ. ರಿನೋವೇಷನ್ ಆಗುತ್ತಿದ್ದುದರಿಂದ ರೋಗಿಗಳು ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಉಡುಪಿ ಅಗ್ನಿಶಾಮಕ ದಳದ ತಂಡ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದೆ.