DAKSHINA KANNADA
ಮಂಗಳೂರಿನಲ್ಲಿ ಸರಣಿ ಸ್ಪೋಟಕ್ಕೆ ಸಂಚು ರೂಪಿಸಿದ್ದ ಉಗ್ರ ಶಾರೀಕ್!
ಮಂಗಳೂರು, ನವೆಂಬರ್ 22: ನಗರದ ನಾಗುರಿ ಬಳಿ ಶನಿವಾರ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ನಗರದಲ್ಲಿ ಸರಣಿ ಸ್ಪೋಟ ನಡೆಸುವ ಮೂಲಕ ಕರಾವಳಿಯಲ್ಲಿ ತಲ್ಲಣ ಸೃಷ್ಟಿಸುವ ಸಂಚು ರೂಪಿಸಿದ್ದರು ಎನ್ನುವುದು ಇದೀಗ ಪೊಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ನಡುವೆ ಸ್ಪೋಟದಲ್ಲಿ ಗಾಯಗೊಂಡಿರುವ ಶಂಕಿತ ಉಗ್ರ ತೀರ್ಥಹಳ್ಳಿಯ ಶಾರೀಕ್ನ ವಿಚಾರಣೆಯನ್ನು ಪೊಲೀಸರು ಇನ್ನಷ್ಟೇ ತೀವ್ರಗೊಳಿಸಬೇಕಾಗಿದೆ. ನಿನ್ನೆ ಮಂಗಳೂರಿಗೆ ಬಂದಿದ್ದ ಆತನ ಮನೆಮಂದಿ ಈತ ಶಾರೀಕ್ ಎಂದು ದೃಢಪಡಿಸಿದ ಬಳಿಕ ಪೊಲೀಸರ ತನಿಖೆಗೆ ಇನ್ನಷ್ಟು ವೇಗ ಸಿಕ್ಕಿದೆ. ಶಾಂತಿ ಕದಡುವ ಉದ್ದೇಶದಿಂದ ಶಾರೀಕ್ ನಗರದ ಹಲವು ಭಾಗಗಳಲ್ಲಿ ಪ್ರಬಲ ಸ್ಪೋಟಕ್ಕೆ ಸಂಚು ರೂಪಿಸಿದ್ದ. ಆದರೆ ದೇವರೇ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ. ಆತ ಬಾಂಬ್ ತಯಾರಿಕೆಯಲ್ಲಿ ಇಷ್ಟೊಂದು ಪರಿಣತಿ ಹೊಂದಿಲ್ಲದ ಕಾರಣ ಸ್ಪೋಟ ದೊಡ್ಡ ಮಟ್ಟದಲ್ಲಿ ಸಂಭವಿಸಿಲ್ಲ ಎಂದು ನಿನ್ನೆ ಎಡಿಜಿಪಿ ಕೂಡಾ ಹೇಳಿದ್ದರು.
ಈತ ಉಗ್ರ ಸಂಘಟನೆ ಕುರಿತು ಮಾಹಿತಿ ಕಲೆ ಹಾಕಲು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದ. ಯಾವ ಸಂಘಟನೆ ಜೊತೆಗೆ ಈತ ನಂಟು ಹೊಂದಿದ್ದಾನೆ ಎನ್ನುವುದು ತನಿಕೆಯಿಂದ ಬಯಲಾಗಬೇಕಾಗಿದೆ. ಐಸಿಸ್ನಿಂಧ ಪ್ರೇರೇಪಣೆ ಪಡೆದು ಅದೇ ಮಾದರಿಯಲ್ಲಿ ಕೃತ್ಯ ಎಸಗುತ್ತಿದ್ದ ಎನ್ನುವುದು ಬಯಲಾಗಿದೆ.
ಅಬ್ದುಲ್ ಮತೀನ್ ಎಂಬಾತನೇ ಸ್ಪೋಟದ ಮಾಸ್ಟರ್ ಮೈಂಡ್ ಆಗಿದ್ದು, ಈತ ಬೆಂಗಳೂರಿನಲ್ಲಿ ನಡೆದ ಸ್ಪೋಟದ ಮಾಸ್ಟರ್ ಮೈಂಡ್ ಆಗಿದ್ದ. ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಎನ್ಐಎ ಆತನ ಪತ್ತೆಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಆತನ ಬಂಧನವಾದರೆ ಇನ್ನಷ್ಟು ಉಗ್ರರ ಕುರಿತ ಇನ್ನಷ್ಟು ಮಾಹಿತಿ ಸಿಗಲಿದೆ.
ಇನ್ನು ರಾಜ್ಯದ 7 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆಗಾಗಿ 10 ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಶಿವಮೊಗ್ಗ, ಮೈಸೂರು ಪೊಲೀಸ್ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ತನಿಖಾ ಕಾರ್ಯದಲ್ಲಿ ಸಹಕರಿಸುತ್ತಿದ್ದಾರೆ. ಎನ್ಐಎ ತಂಡ ಈ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತಿದೆ.
You must be logged in to post a comment Login