KARNATAKA
ಮಗನನ್ನೇ ಅಪಹರಿಸಿದ ತಂದೆ: ಆರೋಪಿ ಪೊಲೀಸ್ ಬಲೆಗೆ
ಬೆಂಗಳೂರು, ಜೂನ್ 25: ಹೆಂಡತಿ ಮೇಲಿನ ಕೋಪಕ್ಕೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಿನಿಮೀಯ ರೀತಿಯಲ್ಲಿ ಮಗುವನ್ನು ಅಪಹರಿಸಿದ ತಂದೆಯನ್ನು ನಗರದ ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಉದ್ಯಮಿ ಹರಿಕೃಷ್ಣ ಬಂಧಿತ ಆರೋಪಿ. ಜೂ.16ಕ್ಕೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯ ಜಿಕೆವಿಕೆ ಬಳಿ ಬಂದಿದ್ದ ಆರೋಪಿ ತಮ್ಮ ಹೆಂಡತಿಯ ಕೈಯಲ್ಲಿದ್ದ 6 ವರ್ಷದ ಮಗನನ್ನು ಅಪಹರಿಸಿಕೊಂಡು ಹೋಗಿದ್ದರು. ದೂರುದಾರಳೊಂದಿಗೆ ಲಿವಿಂಗ್ ಟುಗೆದರ್ನಲ್ಲಿದ್ದ ಆರೋಪಿ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದರು. ಇಬ್ಬರಿಗೂ ಆರು ವರ್ಷದ ಗಂಡು ಮಗುವಿದ್ದು, ಮಗು ವಿಚಾರವಾಗಿ ಇಬ್ಬರೂ ನ್ಯಾಯಾಲಯದ ಮೆಟ್ಟಿಲೇರಿದ್ದರು.
ತಾಯಿ ಮಗುವನ್ನು ಕರೆದೊಯ್ಯಬಹುದು ಎಂದಿದ್ದ ನ್ಯಾಯಾಲಯ ಮಗುವನ್ನು ತಾಯಿಯ ಸುಪರ್ದಿಗೆ ನೀಡಿತ್ತು. ಆದರೆ ತಾಯಿ ತನ್ನ ಮಗನನ್ನು ಶಾಲೆಗೆ ಬಿಡಲು ತೆರಳಿದ್ದಾಗ ಆಟೋದಲ್ಲಿ ಹಿಂಬಾಲಿಸಿ ಆಕೆಯ ಕೈಯಿಂದ ಮಗುವನ್ನು ಕಿತ್ತುಕೊಂಡು ತಾನು ಬಂದಿದ್ದ ಆಟೋದಲ್ಲಿ ಆರೋಪಿ ಪರಾರಿಯಾಗಿದ್ದನು ಎಂದು ದೂರಿನಲ್ಲಿ ದಾಖಲಾಗಿದೆ.
ಮಗುವಿನ ತಾಯಿ ನೀಡಿದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡ ಕೊಡಿಗೆಹಳ್ಳಿ ಪೊಲೀಸರು, ಸತತ 7 ದಿನಗಳ ಕಾಲ ಹುಡುಕಾಟ ನಡೆಸಿ ಆರೋಪಿ ಹರಿಕೃಷ್ಣನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
You must be logged in to post a comment Login