DAKSHINA KANNADA
ಆಮದಿನಿಂದಾಗಿ ಅಡಿಕೆಯ ಬೆಲೆ ಕುಸಿತ,ರೈತ ಸಂಘಗಳ ಒಕ್ಕೂಟದಿಂದ ಮಾ.7ರಂದು ಬೃಹತ್ ಪ್ರತಿಭಟನೆಗೆ ಕರೆ..!
ಮಂಗಳೂರು: “ದ.ಕ ಜಿಲ್ಲೆಯಲ್ಲಿ ಅಡಿಕೆಯ ಆಮದಿನಿಂದಾಗಿ ಅಡಿಕೆಯ ಬೆಲೆ ಕುಸಿದು ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ರೈತ ಒಕ್ಕೂಟವು ಅಡಿಕೆ ಆಮದು ನಿಷೇಧಿಸುವಂತೆ ಹಾಗೂ ಇತರೆ ಬೇಡಿಕೆಗಳೊಂದಿಗೆ ಮಾರ್ಚ್ 7 ಗುರುವಾರದಂದು ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ” ಎಂದು ಒಸ್ವಾಲ್ಡ್ ಫೆರ್ನಾಂಡಿಸ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯ ಅಡಿಕೆ ಮತ್ತು ತೆಂಗು ಬೆಳೆಗಾರರು ಸರಕಾರದ ನಿರ್ಧಾರದಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ತೆಂಗಿನ ಬೆಲೆ ಕುಸಿದ ಸಂದರ್ಭದಲ್ಲಿ ಒಕ್ಕೂಟವು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಪತ್ರ ಮುಖೇನ ಒತ್ತಾಯವನ್ನು ಮಾಡಿತ್ತು. ಅದರ ಪರಿಣಾಮವಾಗಿ ಬೆಲೆ ಕೊಂಚ ಏರಿಕೆಯಾಗಿದೆ. ದೆಹಲಿಯಲ್ಲಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಡುಬಿದದ್ರಿಯ ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಅನ್ನು ಕೇರಳಕ್ಕೆ ಕೊಂಡೊಯ್ಯಲು ರೈತರ ಫಲವತ್ತಾದ ಭತ್ತದ ಗದ್ದೆಗಳನ್ನು ಹಾಳು ಮಾಡಲಾಗುತ್ತಿದೆ. ನಮ್ಮ ಜನಪ್ರತಿನಿಧಿಗಳು ಸದನದಲ್ಲಿ ನಮ್ಮ ಪರವಾಗಿ ಧ್ವನಿ ಎತ್ತಬೇಕು.
ಮಾ.7ರಂದು ಮಧ್ಯಾಹ್ನ ಬಂಟ್ವಾಳ ನಾರಾಯಣ ಗುರು ಸಂಘದಿಂದ ಪಂಪ್ ವೆಲ್ ಮಾರ್ಗವಾಗಿ ಮಂಗಳೂರಿಗೆ ಟ್ರಾಕ್ಟರ್, ವಾಹನ ಜಾಥಾ ಮೂಲಕ ರೈತರು ಬಂದು ನಗರದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸನ್ನಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
You must be logged in to post a comment Login