KARNATAKA
ಕೊರೊನಾಗೆ ಬಲಿಯಾದ ಪತಿ – 12 ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಬೆಂಗಳೂರು ಸೆಪ್ಟೆಂಬರ್ 22: ಕೊರೊನಾಗೆ ಪತಿ ಬಲಿಯಾಗಿ ಜೀವನ ನಿರ್ವಹಣೆಗೆ ಕಷ್ಟವಾದ ಹಿನ್ನಲೆ ತಾಯಿ ಮಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ವರಲಕ್ಷ್ಮೀ(38) ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಎರಡು ಹೆಣ್ಮಕ್ಕಳ ತಾಯಿಯಾಗಿರುವ ವರಲಕ್ಷ್ಮೀ, ತಮ್ಮ 12 ವರ್ಷದ ಪುತ್ರಿ ದಿವ್ಯಾಶ್ರೀಗೆ ಆತ್ಮಹತ್ಯೆಗೆ ಪ್ರಚೋದಿಸಿ ಮನೆಯ ಫ್ಯಾನ್ಗೆ ನೇಣುಬಿಗಿದುಕೊಳ್ಳಲು ಸಹಾಯ ಮಾಡಿದ್ದಾರೆ. ನಂತರ ತಾನೂ ಕೂಡ ಅದೇ ಪ್ಯಾನ್ಗೆ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.
ತಾಯಿ ನೇಣು ಹಾಕಿಕೊಳ್ಳುತ್ತಿರುವುದನ್ನು ನೋಡಿದ ಕಿರಿಯ ಮಗಳು ಮನೆ ಹೊರಗೆ ಬಂದು ಕಿರುಚಿಕೊಂಡಿದ್ದಾಳೆ. ತಕ್ಷಣ ಸ್ಥಳೀಯರು ತಾಯಿ ಮತ್ತು ಮಗಳು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ದಿವ್ಯಾ(12) ಅಸುನೀಗಿದ್ದು, ವರಲಕ್ಷ್ಮೀ (38) ಸ್ಥಿತಿ ಗಂಭೀರವಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ವರಲಕ್ಷ್ಮಿ ಪತಿ ತಿಮ್ಮರಾಜು ಮೂರು ತಿಂಗಳ ಹಿಂದೆ ಕೋವಿಡ್ ಗೆ ಬಲಿಯಾಗಿದ್ದರು. ಹೀಗಾಗಿ ಜೀವನ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login