KARNATAKA
ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ- ಅರೆಬರೆ ಬಟ್ಟೆ ಧರಿಸಿ ಬಂದ್ರೆ ನೋ ಎಂಟ್ರಿ

ಕಾರವಾರ, ಜೂನ್ 23: ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಜಿಲ್ಲೆಯ ಪುರಾಣ ಪ್ರಸಿದ್ಧ ಸ್ಥಳವಾದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಈಗಾಗಲೇ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.
ಇದರ ಬೆನ್ನಲ್ಲೇ ಇದೀಗ ಭಟ್ಕಳ ತಾಲೂಕಿನ ಪ್ರಸಿದ್ಧ ಶಿವ ಕ್ಷೇತ್ರವಾದ ಮುರುಡೇಶ್ವರ ಶಿವಾಲಯದಲ್ಲೂ ವಸ್ತ್ರ ಸಂಹಿತೆ ಜಾರಿಗೆ ತಂದಿದೆ ಇಲ್ಲಿನ ಆಡಳಿತ ಮಂಡಳಿ. ಮುರುಡೇಶ್ವರ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದ್ದು, ಲಕ್ಷಾಂತರ ಜನ ಪ್ರವಾಸಿಗರು ಮುರುಡೇಶ್ವರಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಜಲಸಾಹಸ ಕ್ರೀಡೆ, ಸ್ಕೂಬಾ ಡೈವ್ಗಳು ಪ್ರಸಿದ್ಧವಾಗಿದ್ದು, ಬೃಹತ್ ಶಿವನ ಮೂರ್ತಿ ವಿಶ್ವ ಪ್ರಸಿದ್ಧಿ ಪಡೆದಿದೆ.

ಇಲ್ಲಿಗೆ ಬರುವ ಪ್ರವಾಸಿಗರು ಕಡಲ ತೀರಕ್ಕೆ ಭೇಟಿ ನೀಡಿದ ನಂತರ ಶಿವನ ದೇವಾಲಯಕ್ಕೂ ಭೇಟಿ ಕೊಡುತ್ತಾರೆ. ಈ ವೇಳೆ ಪುರುಷರು ಚಡ್ಡಿ, ಬನಿಯನ್ನಲ್ಲಿ ಬಂದರೆ, ಮಹಿಳೆಯರು ಸಹ ಧಾರ್ಮಿಕ ಸ್ಥಳದಲ್ಲಿ ಧರಿಸಬೇಕಾದ ವಸ್ತ್ರ ಧರಿಸದೇ ಆಕ್ಷೇಪಾರ್ಹ ರೀತಿಯಲ್ಲಿ ದೇವರ ದರ್ಶನಕ್ಕೆ ಬರುತಿದ್ದರು. ಆಸ್ತಿಕ ಭಕ್ತರು ಈ ಬಗ್ಗೆ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿ ತರುವಂತೆ ಮನವಿ ಮಾಡಿದ್ದರು.
ಈಗ ಆಡಳಿತ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಪುರುಷರಿಗೆ ಪಂಚೆ ಮತ್ತು ಮಹಿಳೆಯರಿಗೆ ಸೀರೆ, ಚೂಡಿದಾರ ಧರಿಸಿದರೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸಲಿದೆ. ದೇವಾಲಯದ ಎದುರುಭಾಗ ಸೂಚನ ಫಲಕ ಹಾಕಲಾಗಿದ್ದು, ಯಾವ ವಸ್ತ್ರ ಧರಿಸಬೇಕು ಎಂದು ಫಲಕದಲ್ಲಿ ನಮೂದಿಸಲಾಗಿದೆ. ಈ ದೇವಸ್ಥಾನ ಖಾಸಗಿ ಆಡಳಿತ ಮಂಡಳಿ ಹೊಂದಿದ್ದು, ಉದ್ಯಮಿ ಆರ್.ಎನ್.ಶೆಟ್ಟಿ ಅವರ ಕುಟುಂಬ ಈ ದೇವಸ್ಥಾನದ ನಿರ್ವಹಣೆ ಮಾಡುತ್ತಿದೆ.