Connect with us

    LATEST NEWS

    ದಿನಕ್ಕೊಂದು ಕಥೆ- ಮರುವಾಖ್ಯಾನ

    ಮರುವಾಖ್ಯಾನ

    ಪುಸ್ತಕದ ಪುಟ ತಿರುವಿದಂತೆ ಕಥೆಯ ಬಲೆ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಯಿತು. ಓದಿನ ಜಾಡುಹಿಡಿದು ಹೊರಟವನಿಗೆ ಲೋಕದ ಅರಿವೇ ಇಲ್ಲ. ಹೊಟ್ಟೆ ಅನ್ನ ಕೇಳುತ್ತಿಲ್ಲ, ಗಂಟಲು‌ನೀರು ಬಯಸಲಿಲ್ಲ, ಮನಸ್ಸು ಅಕ್ಷರಗಳನ್ನು ಜೋಡಿಸುತ್ತಾ ಸಾಗುತ್ತಿತ್ತು. ಪುಸ್ತಕದ ಕೊನೆಯ ಪುಟಕ್ಕೆ ತಲುಪುವಾಗ ಹಂಪೆಯ ವೈಭವದ ಗತಕಾಲಗಳು ಕೊಂಪೆಯಾಗಿ ಬದಲಾಗುವವರೆಗೆ ತಂದು ಪೂರ್ಣವಿರಾಮ ನೀಡಲಾಗಿತ್ತು.

    ಇಲ್ಲಿ ನಾ ಪುಸ್ತಕ ಮಡಚಿದೆ. ದೂರದಲ್ಲೊಂದು ಕೋಣೆಯ ಟೇಬಲ್ ಮೇಲೆ ಯಾವುದೋ ಕಡತವೊಂದು ತೆರೆಯಲ್ಪಟ್ಟಿತು. ಅಂಕಿತದ ಮುದ್ರೆಯೂ ಬಿತ್ತು. ಸಾವಿರ ಕೋಟಿಗಳ ವ್ಯವಹಾರ ಮತ್ತೆ ಸಂಸ್ಕೃತಿಯ ಪುನರುಜ್ಜೀವನಗೊಳಿಸುವ ಕೈಂಕರ್ಯ.
    ಅದು ಹಂಪೆಯನ್ನು ಮರಳಿ ಗತಕಾಲದ ವೈಭವಕ್ಕೆ ತೆರೆದಿಡುವ ಪ್ರಯತ್ನ.

    ಅಲ್ಲಿ ಸಂಸ್ಕೃತಿಯ ಉಳಿವಿಗಿಂತ ಹಣದ ಗಳಿಕೆಯೇ ಎದ್ದು ಕಾಣುತ್ತಿತ್ತು. ತುಂಡಾಗಿರುವ ಶೀಲಾ ಮೂರ್ತಿಗಳನ್ನು, ಭಗ್ನವಾಗಿರುವ ರಥಗಳನ್ನು, ಕೆತ್ತನೆಗಳನ್ನು, ಸಿಮೆಂಟ್ ನಿಂದ ಜೋಡಿಸಿ ಪೂರ್ಣ ರೂಪ ನೀಡುವ ಮಹತ್ಕಾರ್ಯ. ಮೂಲ ನಿರ್ಮಾಣದ ಯೋಚನೆ, ಶೈಲಿ ಗೊತ್ತಿಲ್ಲ. ಕಲಾಕುಸುರಿಗಳ ವಿನ್ಯಾಸ ತಿಳಿದಿಲ್ಲ, ಒಟ್ಟಿನಲ್ಲಿ ಪೂರ್ಣಗೊಳಿಸುವ ಕಾರ್ಯವಷ್ಟೆ. ಎಷ್ಟೆಂದರೂ ಮೂಲ ಮತ್ತು ತಯಾರಿಕೆಯ ಭಿನ್ನತೆ ಎದ್ದುಕಾಣುವುದು ಸತ್ಯ.

    ಇತಿಹಾಸ ನಮ್ಮ ನೋಡಿ ನಗುವುದೂ ದಿಟ. ಉಗ್ರ ಪ್ರತಿಭಟನೆಯಾದ ಕಾರಣ ಕಡತ ಮೂಲೆಗೊರಗಿತು. ಇನ್ಯಾವಾಗ ತೆರೆಯುತ್ತೋ ತಿಳಿದಿಲ್ಲ. ನಾ ಕೋಣೆಯಲ್ಲಿ ಮತ್ತೊಂದು ಪುಸ್ತಕವನ್ನು ಅರಸುತ್ತಾ ಓದಿನ ಜಾಡು ಹಿಡಿಯಲು ಆರಂಭಿಸಿದೆ.
    ಆ ಕೋಣೆಯಲ್ಲಿ ಇನ್ನ್ಯಾವ ಹೊಸ ಫೈಲ್ ತೆರೆದುಕೊಳ್ಳುತ್ತದೋ….

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply