BELTHANGADI
ಸಮಾಜದ ಅಭಿವೃದ್ಧಿಗೆ ಹೆಗ್ಗಡೆಯವರು ನೀಡಿದ ಕೊಡುಗೆಗಾಗಿ ಅವರ ಮುಂದೆ ತಲೆ ತಗ್ಗಿಸಿ ವಂದಿಸುತ್ತೇನೆ – ರಕ್ಷಣಾ ಸಚಿವೆ

ಸಮಾಜದ ಅಭಿವೃದ್ಧಿಗೆ ಹೆಗ್ಗಡೆಯವರು ನೀಡಿದ ಕೊಡುಗೆಗಾಗಿ ಅವರ ಮುಂದೆ ತಲೆ ತಗ್ಗಿಸಿ ವಂದಿಸುತ್ತೇನೆ – ರಕ್ಷಣಾ ಸಚಿವೆ
ಧರ್ಮಸ್ಥಳ ಅಕ್ಟೋಬರ್ 29: ಧರ್ಮಸ್ಥಳದಲ್ಲಿ ಪ್ರಗತಿ ರಕ್ಷಾ ಕವಚ ಯೋಜನೆಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಉದ್ಘಾಟಿಸಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಗತಿ ರಕ್ಷಾ ಕವಚ ಗ್ರೂಪ್ ಇನ್ಶೂರೆನ್ಸ್ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಸಮಾರಂಭವನ್ನು ಉದ್ಘಾಟಿಸಿ ಕನ್ನಡದಲ್ಲೇ ಮಾತು ಪ್ರಾರಂಭಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಮಸ್ತೆ… ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆಯವರೇ, ಎಂಪಿ ನಳಿನ್ ಕುಮಾರ್ ಕಟೀಲ್ ಅವರೇ ಎಂದು ಕನ್ನಡದಲ್ಲೇ ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ಎಲ್ಐಸಿ ಚೇರ್ಮ್ಯಾನ್ ವಿ.ಕೆ.ಶರ್ಮಾ ಅವರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸನ್ಮಾನಿಸಲು ಮುಂದಾದಾಗ ಸನ್ಮಾನವನ್ನು ನಿರಾಕರಿಸಿದರು. ತಾನು ಸನ್ಮಾನ ಸ್ವೀಕರಿಸುವುದಿಲ್ಲ ಎಂದು ನಯವಾಗಿ ನಿರಾಕರಿಸಿದರು.

ನನಗೆ ಚಿಕ್ಕಂದಿನಿಂದಲೂ ಧರ್ಮಸ್ಥಳ ತನಗೆ ಒಂದು ಶ್ರೇಷ್ಠ ಪ್ರದೇಶ ಎಂದು ಹೇಳಿದ ಅವರು ಧರ್ಮಾಧಿಕಾರಿಯವರ ಬಳಿ ಕೂತಾಗ, ನಿಂತಾಗ ಅತೀವ ಆಧ್ಯಾತ್ಮಿಕ ಶಕ್ತಿಯ ಅನುಭವವಾಗುತ್ತದೆ, ಮಂಜುನಾಥನೇ ಹೆಗ್ಗಡೆಯವರನ್ನು ನ್ಯಾಯಕ್ಕಾಗಿ ಓರ್ವ ಪ್ರತಿನಿಧಿಯನ್ನಾಗಿ ಆರಿಸಿದ್ದಾನೆ ಎಂದು ಹೇಳಿದರು. ಹೆಗಡೆಯವರು ಧರ್ಮಸ್ಥಳದ ಧರ್ಮಾಸನದಲ್ಲಿ ಕುಳಿತ ಬಳಿಕ ನ್ಯಾಯದ ಪ್ರತಿರೂಪವಾಗುತ್ತಾರೆ. ದೇವರ ಆಶೀರ್ವಾದದೊಂದಿಗೆ ಅಭಿವೃದ್ಧಿಯ ದೃಷ್ಠಿಯೊಂದಿಗೆ ಹೆಗ್ಗಡೆಯವರು ಧರ್ಮ ಪಾಲಿಸುತ್ತಾರೆ.
ಬಡವರನ್ನು ಶಕ್ತಿಯುತಗೊಳಿಸುವ ಕೆಲಸ ಧರ್ಮಸ್ಥಳ ಮಾಡುತ್ತಲೇ ಬರುತ್ತಿದೆ ಎಂದು ಹೇಳಿದರು. 50 ವರ್ಷಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಮಾಜದ ಅಭಿವೃದ್ಧಿಗೆ ತನ್ನನ್ನೇ ಅರ್ಪಿಸಿದ್ದಾರೆ. ಧರ್ಮಸ್ಥಳದಲ್ಲಿ ಸಾಲವನ್ನು ಮರುಪಾವತಿಸಲು ಒತ್ತಾಯಿಸಲಾಗುವುದಿಲ್ಲ, ಬದಲಾಗಿ, ಜನರನ್ನು ಸುಶಿಕ್ಷಿತರನ್ನಾಗಿಸುವ ಮೂಲಕ ಸಾಲ ಮರುಪಾವತಿಸುವಂತೆ ಮಾಡಲಾಗುತ್ತದೆ. ಕಳೆದ 50 ವರ್ಷದಿಂದ ಸಮಾಜದ ಅಭಿವೃದ್ಧಿ ಒಂದು ಮಿಷನ್ ರೀತಿಯಲ್ಲಿ ಧರ್ಮಾಧಿಕಾರಿ ಕೆಲಸ ಮಾಡಿದ್ದಾರೆ ಎಂದರು.
ಪ್ರಗತಿ ರಕ್ಷಾ ಕವಚ ಇನ್ಶೂರೆನ್ಸ್ 40 ಲಕ್ಷ ಜನರಿಗೆ ಸುರಕ್ಷತೆಯನ್ನು ಒದಗಿಸುತ್ತಿದೆ. ಜನರಿಗೆ ಇದೊಂದು ಉತ್ತಮ ಸೌಲಭ್ಯ ವ್ಯವಸ್ಥೆಯಾಗಿದೆ. ಧರ್ಮ ಪ್ರತಿಯೊಂದು ರೀತಿಯಲ್ಲೂ ಇಲ್ಲಿ ಮಾರ್ಗದರ್ಶನ ನೀಡುತ್ತಿದೆ. ಹೀಗಾಗಿ ಈ ಪ್ರದೇಶ ಅಭಿವೃದ್ಧಿ ಕಾಣುವುದು ಆಶ್ಚರ್ಯವೇನಲ್ಲ. ಸಮಾಜದ ಅಭಿವೃದ್ಧಿಗೆ ಹೆಗ್ಗಡೆಯವರು ನೀಡಿದ ಕೊಡುಗೆಗಾಗಿ ಅವರ ಮುಂದೆ ತಲೆ ತಗ್ಗಿಸಿ ವಂದಿಸುತ್ತೇನೆ ಎಂದರು.