ಉಡುಪಿ ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ
ಉಡುಪಿ ಅಕ್ಟೋಬರ್ 18: ಇಂದು ದೀಪಾವಳಿಯ ಮೊದಲ ದಿನ. ಶ್ರೀಕೃಷ್ಣ ಪರಮಾತ್ಮ ನರಕ ರಾಕ್ಷಸನನ್ನು ಕೊಂದ ನೆನಪಿಗಾಗಿ ನರಕಚತುದರ್ಶಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಉಡುಪಿಯ ಶ್ರೀಕೃಷ್ಣ ಮಠದಲ್ಲೂ ಕೂಡಾ ಇಂದು ಬೆಳಿಗ್ಗೆಯಿಂದಲೇ ಹಬ್ಬದ ವಾತಾವರಣ ಕಂಡುಬಂತು. ಬೆಳಿಗ್ಗೆ ನಾಲ್ಕೂವರೆ ಗಂಟೆ ಹೊತ್ತಿಗೆ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳಿಂದ ಪಶ್ಚಿಮ ಜಾಗರ ಪೂಜೆ ನೆರವೇರಿತು.

ಬಳಿಕ ಶಿಷ್ಯರಿಗೆ ಹಾಗೂ ಭಕ್ತರಿಗೆ ತೈಲ ಅಭ್ಯಂಜನಕ್ಕಾಗಿ ಸ್ವಾಮೀಜಿಗಳು ಎಣ್ಣೆಯನ್ನು ವಿತರಿಸಿದರು. ಅಲ್ಲದೇ ಪೇಜಾವರ ಮಠದ ಕಿರಿಯ ಯತಿಗಳಾದ ವಿಶ್ವಪ್ರಸನ್ನ ತೀರ್ಥ , ಕಾಣಿಯೂರು ಹಾಗೂ ಸೋದೆ ಮಠದ ಸ್ವಾಮೀಜಿಗಳು ತಮ್ಮ ಶಿಷ್ಯರಿಗೆ ಹಾಗೂ ಮಠಕ್ಕೆ ಆಗಮಿಸಿದ ನೂರಾರು ಭಕ್ತರಿಗೆ ತಲೆ ಹಾಗೂ ಮೈಗೆ ಎಣ್ಣೆ ಹಚ್ಚಿದರು.
ಇನ್ನು ಸ್ವಾಮೀಜಿಗಳು ಕೂಡಾ ತಮ್ಮಶಿಷ್ಯರಿಂದ ಎಣ್ಣೆ ಹಚ್ಚಿಸಿಕೊಂಡು, ಬಳಿಕ ಬಿಸಿನೀರಿನಿಂದ ತೈಲ ಅಭ್ಯಂಜನ ಮಾಡಿಕೊಂಡೆರು. ಅಲ್ಲದೇ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೃಷ್ಣ ಮಠದ ಸುತ್ತಮುತ್ತ ದೀಪ ಹಚ್ಚಿ ಹಬ್ಬವನ್ನು ಆಚರಿಸಲಾಗುತ್ತಿದೆ.
