LATEST NEWS
ಸಾಮಾಜಿಕ ಜಾಲತಾಣದಲ್ಲಿ ನೇಜಾರಿನ ಹತ್ಯಾಕಾಂಡ ಸಂಭ್ರಮಿಸಿ ಪೋಸ್ಟ್ – ಪ್ರಕರಣ ದಾಖಲಿಸಿದ ಪೊಲೀಸರು
ಉಡುಪಿ ನವೆಂಬರ್ 17: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಉಡುಪಿ ನೇಜಾರಿನಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಸಂಭ್ರಮಿಸಿ ಪೋಸ್ಟ್ ಮಾಡಿದ ಪೇಜ್ ವಿರುದ್ದ ಉಡುಪಿ ಸೇನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನವೆಂಬರ್ 12 ರಂದು ಆರೋಪಿ ಪ್ರವೀಣ್ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ, ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ಕಿಡಿಗೇಡಿಗಳು ಈ ಹತ್ಯಾಕಾಂಡವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿ ಪೋಸ್ಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ‘ಹಿಂದು ಮಂತ್ರ’ ಎಂಬ ಪೇಜ್ನಲ್ಲಿ ಕೊಲೆ ಆರೋಪಿಯನ್ನು ಸಾಧಕನಂತೆ ಬಿಂಬಿಸಿರುವುದು ಕಂಡುಬಂದಿದೆ. ‘ಹಿಂದು ಮಂತ್ರ’ (Hindu_Mantra) ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ಬಗ್ಗೆ ‘ಸ್ಟೋರಿ’ ಹಾಕಲಾಗಿದ್ದು, ‘‘15 ನಿಮಿಷದಲ್ಲಿ 4 ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆ’’ ಎಂಬ ಶೀರ್ಷಿಕೆ ನೀಡಲಾಗಿದೆ. ಅಲ್ಲದೆ, ಆರೋಪಿ ಪ್ರವೀಣ್ ಚೌಗುಲೆ ಫೋಟೋಗೆ ‘ಕಿರೀಟ’ ತೊಡಿಸಿ ವಿಕೃತಿ ಮೆರೆಯಲಾಗಿದೆ. ತಮ್ಮ ಕೃತ್ಯಕ್ಕೂ ಸಮರ್ಥನೆ ನೀಡಿರುವ ಕಿಡಿಗೇಡಿಗಳು ‘ಉಡುಪಿ ಹುಡುಗಿಯರ ವಿಚಾರದಲ್ಲಿ ಯಾರೂ ಬಂದಿಲ್ಲ. ಆದ್ದರಿಂದ, ನಾವೂ ಈ ವಿಚಾರಕ್ಕೆ ಬರುವುದಿಲ್ಲ’ ಎಂದು ಬರೆಯಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಲ್ಲದೆ ಈ ‘ಹಿಂದು ಮಂತ್ರ’ ಇನ್ಸ್ಟಾಗ್ರಾಂ ಖಾತೆಯಲ್ಲಿ ಮುಸ್ಲಿಮ್ ಮಹಿಳೆಯರನ್ನು ಅವಹೇಳನ ಮಾಡುವಂತಹ ಹಲವಾರು ಫೋಟೊ, ವಿಡಿಯೋಗಳನ್ನು ಹಂಚಿಕೊಂಡು ಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದ ಹಲವು ಪೋಸ್ಟ್ಗಳಿವೆ. ಈ ಬಗ್ಗೆಯೂ ಕ್ರಮವಾಗಲಿ ಎಂಬ ಒತ್ತಾಯ ಕೇಳಿಬಂದಿದೆ.
You must be logged in to post a comment Login