Connect with us

    FILM

    ಚೆಕ್ ಬೌನ್ಸ್ ಪ್ರಕರಣ ಮುಂಗಾರುಮಳೆ ಖ್ಯಾತಿಯ ಹಿರಿಯ ನಟಿ ಪದ್ಮಜಾರಾವ್ ಗೆ ಮೂರು ತಿಂಗಳು ಜೈಲು ಶಿಕ್ಷೆ

    ಮಂಗಳೂರು ಅಗಸ್ಟ್ 27: ಚೆಕ್ ಬೌನ್ಸ್‌ ಪ್ರಕರಣದಲ್ಲಿ ಮುಂಗಾರುಮಳೆ ಖ್ಯಾತಿಯ ಹಿರಿಯ ನಟಿ ಪದ್ಮಜಾ ರಾವ್‌ ಅವರಿಗೆ ಮಂಗಳೂರಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹ 40.20 ಲಕ್ಷ ದಂಡ ವಿಧಿಸಿದೆ.


    ಮಂಗಳೂರಿನ ವೀರೂ ಟಾಕೀಸ್ ಸಂಸ್ಥೆ ಮಾಲೀಕ ವಿರೇಂದ್ರ ಶೆಟ್ಟಿ ಅವರಿಂದ ನಟಿ ನಟಿ ಪದ್ಮಜಾ ರಾವ್‌ ಅವರು ₹ 40 ಲಕ್ಷ ಕೈ ಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ 2020ರ ಜೂನ್‌ 17ರಂದು ಐಸಿಐಸಿಐ ಬ್ಯಾಂಕಿನ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿರುವ ತಮ್ಮ ಖಾತೆಗೆ ಸಂಬಂಧಿಸಿದ ಚೆಕ್‌ ನೀಡಿದ್ದರು.

    ಬಳಿಕ ಚೆಕ್‌ ಅನ್ನು ನಗದೀಕರಿಸಲು ಬ್ಯಾಂಕ್ ಗೆ ಹಾಕಿದಾಗ, ಪದ್ಮಜಾ ರಾವ್ ಅವರ ಖಾತೆಯಲ್ಲಿ ಅಷ್ಟೊಂದು ಮೊತ್ತ ಇರಲಿಲ್ಲ ಎಂದು ಚೆಕ್ ಬೌನ್ಸ್ ಆಗಿತ್ತು. ಬಳಿಕ ವೀರೇಂದ್ರ ಶೆಟ್ಟಿ ಅವರು 15 ದಿನಗಳ ಒಳಗೆ ಸಾಲದ ಹಣ ಪಾವತಿಸುವಂತೆ ‌2020ರ ಜೂನ್ 30ರಂದು ಪದ್ಮಜಾ ರಾವ್‌ ಅವರಿಗೆ ನೋಟಿಸ್‌ ನೀಡಿದರೂ ಅವರು ಹಣ ಪಾವತಿಸಿರಲಿಲ್ಲ. ಬಳಿಕ ಅವರು ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.
    ಸಮನ್ಸ್‌ ಜಾರಿಯಾದ ಬಳಿಕ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಪದ್ಮಜಾ ರಾವ್‌ ಅವರು ‘ನಾನು ದೂರುದಾರರಿಂದ ಯಾವುದೇ ಸಾಲ ಪಡೆದಿಲ್ಲ ಹಾಗೂ ಅವರಿಗೆ ಯಾವುದೇ ಚೆಕ್‌ ನೀಡಿಲ್ಲ’ ಎಂದು ಹೇಳಿಕೆ ನೀಡಿದ್ದರು.

    ‘₹52.70 ಲಕ್ಷ ವಂಚನೆ ಮಾಡಿದ ಬಗ್ಗೆ ವೀರೇಂದ್ರ ಶೆಟ್ಟಿ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ 2020 ಮಾರ್ಚ್‌ 23ರಂದು ದೂರು ದಾಖಲಿಸಿದ್ದಕ್ಕೆ ಪ್ರತಿಯಾಗಿ ತಮ್ಮ ಕಕ್ಷಿದಾರರ ವಿರುದ್ಧ ಈ ಆರೋಪ ಮಾಡಿದ್ದಾರೆ. ಅವರ ಮನೆಯಿಂದ ಚೆಕ್‌ ಕಳವು ಮಾಡಿ ಸಹಿಯನ್ನು ಪೋರ್ಜರಿ ಮಾಡಲಾಗಿದೆ’ ಎಂದು ಪದ್ಮಜಾ ರಾವ್‌ ಪರ ವಕೀಲರು ವಾದಿಸಿದ್ದರು. ಆದರೆ, ಇದಕ್ಕೆ ಪೂರಕ ಪುರಾವೆಗಳನ್ನು ಒದಗಿಸುವಲ್ಲಿ ಅವರು ವಿಫಲರಾಗಿದ್ದರು.

    8ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್‌ ಪಿ.ಎ ಅವರು, ‘ಪದ್ಮಜಾ ರಾವ್‌ ಅವರು ₹ 40.20 ಲಕ್ಷ ದಂಡ ಪಾವತಿಸಬೇಕು. ಅದರಲ್ಲಿ ₹ 40.17 ಲಕ್ಷವನ್ನು ದೂರುದಾರರಿಗೆ ನೀಡಬೇಕು. ಹಾಗೂ ₹ 3 ಸಾವಿರವನ್ನು ಸರ್ಕಾರಕ್ಕೆ ಪಾವತಿಸಬೇಕು’ ಎಂದು ತೀರ್ಪು ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply