LATEST NEWS
ನಿಮ್ಮ ಮಾಸ್ಕ್ ಎಲ್ಲಿ ಎಂದ ಬಾಲಕನ ಮಾತಿಗೆ ಬೆಲೆ ಕೊಡದ ಜನ…..!!

ಧರ್ಮಶಾಲಾ ಜುಲೈ 07: ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನಲೆ ಹಲವು ರಾಜ್ಯಗಳು ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿವೆ. ತಿಂಗಳುಗಟ್ಟಲೇ ಮನೆಯಲ್ಲೇ ಕುಳಿತಿದ್ದ ಜನರು ಅನ್ಲಾಕ್ ಆಗುತ್ತಿದ್ದಂತೆ ಪ್ರವಾಸಿ ತಾಣಗಳಿಗೆ ಮುಗಿ ಬಿಳುತ್ತಿದ್ದು, ಎರಡನೇ ಅಲೆಯಲ್ಲಿ ಉಂಟಾದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ.
ಜನ ಎಷ್ಟರಮಟ್ಟಿಗೆ ಕೊರೊನಾದ ಬಗ್ಗೆ ನಿರ್ಲಕ್ಷ ತೋರುತ್ತಿದ್ದಾರೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ , ವಿಡಿಯೋವೊಂದರಲ್ಲಿ ಬಾಲಕನೋರ್ವ ಮಾಸ್ಕ್ ಧರಿಸದೆ ಸುತ್ತುತ್ತಿದ್ದವರನ್ನು ಪ್ರಶ್ನಿಸಿದ್ದಾನೆ. ಆದರೆ ಜನರು ಬಾಲಕನ ಮಾತಿಗೆ ಹೆಚ್ಚಿನ ಮನ್ನಣೆ ನೀಡದೆ ಮುಂದೆ ಸಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ.

ಈಗಾಗಲೇ ಮೂರನೇ ಅಲೆ ಬಗ್ಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದು, ಮೊದಲ ಮತ್ತು ಎರಡನೆಯ ಅಲೆಗಳ ನಡುವೆ ಏನಾಯಿತು ಎಂಬುದನ್ನು ನಾವು ಕಲಿತಂತೆ ಕಾಣುತ್ತಿಲ್ಲ. ಹೆಚ್ಚು ಹೆಚ್ಚು ಜನರು ಒಂದೆಡೆ ಸೇರುತ್ತಿದ್ದಾರೆ. ಪ್ರಕರಣಗಳು ರಾಷ್ಟ್ರೀಯ ಮಟ್ಟದಲ್ಲಿ ಏರಿಕೆಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೂರನೇ ಅಲೆ ಅನಿವಾರ್ಯ. ಇದು ಮುಂದಿನ ಆರರಿಂದ ಎಂಟು ವಾರಗಳಲ್ಲಿ ದೇಶವನ್ನು ಹೊಡೆಯಬಹುದು ಎಂದಿದ್ದಾರೆ.