LATEST NEWS
ನಮ್ಮ ರೈತರು ಭಾರತದ ಆಹಾರ ಸೈನಿಕರು – ಅನ್ನದಾತನ ಬೆಂಬಲಕ್ಕೆ ನಿಂತ ಪ್ರಿಯಾಂಕ ಚೋಪ್ರಾ
ಮುಂಬೈ : ಕೇಂದ್ರ ಸರಕಾರದ ವಿವಾದಿತ ಹೊಸ ಕೃಷಿ ನೀತಿ ವಿರೋಧಿಸಿ ಬಾಲಿವುಡ್ ಸೆಲೆಬ್ರಿಟಿಗಳು ಈಗ ಅಖಾಡಕ್ಕೆ ಧುಮುಕಿದ್ದು, ಪಂಜಾಬ್ ಸೇರಿದಂತೆ ದೇಶದಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಈ ಮಧ್ಯೆ ಅನ್ನದಾತನ ಈ ಹೋರಾಟಕ್ಕೆ ದೇಶದ ಅನೇಕ ಸೆಲೆಬ್ರಿಟಿಗಳು, ಗಣ್ಯರು ಬೆಂಬಲ ನೀಡಿದ್ದಾರೆ. ಈಗ ನಟಿಯರಾದ ಪ್ರಿಯಾಂಕಾ ಚೋಪ್ರಾ ಮತ್ತು ಸೋನಮ್ ಕಪೂರ್ ಕೂಡ ತಮ್ಮ ಬೆಂಬಲ ನೀಡಿದ್ದಾರೆ.
ಬಾಲಿವುಡ್ ನಟ/ಗಾಯಕ ದಿಲ್ಜಿತ್ ದೊಸಾಂಜ್ ಈಗಾಗಲೇ ರೈತರಿಗೆ ತಮ್ಮ ಬೆಂಬಲ ನೀಡಿ, ಪ್ರತಿಭಟನೆಯಲ್ಲೂ ಭಾಗಿಯಾಗಿದ್ದಾರೆ. ಅವರ ಒಂದು ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ, ‘ನಮ್ಮ ರೈತರು ಭಾರತದ ಆಹಾರ ಸೈನಿಕರು. ಅವರ ಭಯವನ್ನು ಹೋಗಲಾಡಿಸಬೇಕಿದೆ. ಅವರ ಆಶಯಗಳನ್ನು ಈಡೇರಿಸಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಈ ಬಿಕ್ಕಟ್ಟುಗಳನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುವುದು ಎಂದು ನಾವು ಖಚಿತಪಡಿಸಿಕೊಳ್ಳಬೇಕು’ ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಸ್ತುತ ಲಂಡನ್ನಲ್ಲಿರುವ ನಟಿ ಸೋನಮ್ ಕಪೂರ್ ಇನ್ಸ್ಟಾಗ್ರಾಮ್ನಲ್ಲಿ ರೈತರು ಪ್ರತಿಭಟನೆ ಮಾಡುತ್ತಿರುವ ಒಂದಷ್ಟು ಫೋಟೋಗಳನ್ನು ಹಂಚಿಕೊಂಡು, ‘ಬೇಸಾಯ ಪ್ರಾರಂಭವಾದಾಗ, ಇತರ ಕಲೆಗಳು ಅನುಸರಿಸುತ್ತವೆ. ಆದ್ದರಿಂದ ರೈತರು ಮಾನವ ನಾಗರಿಕತೆಯ ಸ್ಥಾಪಕರು’ ಎಂದು ಬರೆದುಕೊಂಡಿದ್ದಾರೆ. ಸೋನಮ್ ಪೋಸ್ಟ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
You must be logged in to post a comment Login