LATEST NEWS
300 ಕಿಮೀ ಸ್ಪೀಡ್ ನಲ್ಲಿ ಹೋದರೆ ಸಾಯ್ತಿನಿ ಅಂದವರು…ಅಪಘಾತದಲ್ಲಿ ಪೀಸ್ ಪೀಸ್ ಆದ್ರು…!!
ಲಖನೌ : ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡುತ್ತಾ 300 ಕಿಲೋ ಮೀಟರ್ ವೇಗದಲ್ಲಿ ಬಿಎಂಡಬ್ಲೂ ಕಾರ್ ನ್ನು ಚಲಾಯಿಸಿದ ಪರಿಣಾಮ ನಾಲ್ವರು ಯುವಕರು ಸಾವನಪ್ಪಿದ ಘಟನೆ ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್ಪ್ರೆಸ್ ವೇನಲ್ಲಿ ಸುಲ್ತಾನ್ಪುರ್ ಬಳಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಬಿಹಾರದ ಆನಂದ್ ಪ್ರಕಾಶ್, ಅಖಿಲೇಶ್ ಸಿಂಗ್, ದೀಪಕ್ ಕುಮಾರ್ ಹಾಗೂ ಮುಕೇಶ್ ಎಂದು ಗುರುತಿಸಲಾಗಿದೆ. ಎಲ್ಲರೂ 30 ವಯಸ್ಸಿನ ಆಸುಪಾಸಿನವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಿಎಂಡಬ್ಲೂ ಕಾರಿನಲ್ಲಿ ಕಳೆದ ಶುಕ್ರವಾರ ಪೂರ್ವಾಂಚಲ್ ಎಕ್ಸ್ಪ್ರೆಸ್ ವೇನಲ್ಲಿ ಸುಲ್ತಾನಪುರಕ್ಕೆ ಈ ಯುವಕರ ತಂಡ ತೆರಳುತ್ತಿತ್ತು. ಪಾನಮತ್ತರಾಗಿದ್ದ ಯುವಕರು ಚಾಲಕ ಆನಂದ್ ಪ್ರಕಾಶ್ನನ್ನು ವೇಗವಾಗಿ ಕಾರು ಚಲಾಯಿಸಲು ಪುಸಲಾಯಿಸಿದ್ದರು. ಈ ಘಟನೆ ಫೇಸ್ಬುಕ್ ಲೈವ್ ವಿಡಿಯೊದಲ್ಲಿ ದಾಖಲಾಗಿದ್ದು ಆ ವಿಡಿಯೊ ವೈರಲ್ ಆಗಿದೆ.
ಗಂಟೆಗೆ 300 ಕಿಮೀ ಕಾರು ಓಡಿಸುವ ಸಂದರ್ಭದಲ್ಲೇ ಯುವಕರು ಲೈವ್ ವಿಡಿಯೊ ಮಾಡಿದ್ದಾರೆ. ‘ಹೀಗೆ ಹೋದ್ರೆ ನಾವು ನಾಲ್ವರು ಸತ್ತೇ ಹೋಗುತ್ತೇವೆ’ ಎಂದು ಚಾಲಕ ಆನಂದ್ ಪ್ರಕಾಶ್ ಲೈವ್ನಲ್ಲಿ ಹೇಳುವುದು ದಾಖಲಾಗಿದ್ದು, ಅದರಂತೆ ಆಗಿ ಹೋಗಿದೆ. ತೀವ್ರ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಒಂದಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
‘ಅಪಘಾತದ ಭೀಕರತೆ ಎಷ್ಟಿತ್ತಂದರೆ ಬಿಎಂಡಬ್ಲೂ ಕಾರು ಸಂಪೂರ್ಣ ಪುಡಿ ಪುಡಿಯಾಗಿದ್ದು, ಯುವಕರ ದೇಹಗಳು ಸಂಪೂರ್ಣ ಛಿದ್ರ ಛಿದ್ರ ಆಗಿವೆ. ಕಂಟೈನರ್ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ’ ಎಂದು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
You must be logged in to post a comment Login