Connect with us

    BANTWAL

    ಬಂಟ್ವಾಳ -ಲಂಚ ಸ್ವೀಕರಿಸುತ್ತಿದ್ದ ಉಪ ತಹಶೀಲ್ದಾರ್ ರವಿಶಂಕರ್ ಎಸಿಬಿ ಬಲೆಗೆ

    ಬಂಟ್ವಾಳ ನವೆಂಬರ್ 26: ಆರ್‌ಟಿಸಿ ತಿದ್ದುಪಡಿ ಮಾಡಲು ಲಂಚ ಪಡೆಯುತ್ತಿದ್ದ ಉಪತಹಶೀಲ್ದಾರ್ ಅವರನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕಚೇರಿಯ ಉಪತಹಶೀಲ್ದಾರ್ ರವಿಶಂಕರ್ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ.


    ಸಂತ್ರಸ್ತರೊಬ್ಬರು ತಾಯಿಯ ಹೆಸರಲ್ಲಿರುವ ಜಾಗಕ್ಕೆ ಸಂಬಂಧಿಸಿ ಆರ್‌ಟಿಸಿಯಲ್ಲಿ ತಿದ್ದುಪಡಿ ಮಾಡಿಕೊಡಲು ಉಪತಹಶೀಲ್ದಾರ್ 1,500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆ ಸಂತ್ರಸ್ಥರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು, ಅದರಂತೆ ಪ್ರಕರಣ ದಾಖಲಿಸಲಾಗಿದ್ದು, 1,000 ರೂ. ಲಂಚ ಸ್ವೀಕರಿಸುವ ಸಂದರ್ಭ ಅಧಿಕಾರಿಗಳು ದಾಳಿ ನಡೆಸಿದ್ದರು.

    ಪಜೀರು ನಿವಾಸಿ ಅರುಣ್ ರೊಡ್ರಿಗಸ್ ಅವರ ಬೆಂಜನಪದವಿನಲ್ಲಿಯ ತಾಯಿಯ ಹೆಸರಿನಲ್ಲಿರುವ ಜಾಗವೊಂದರ ಆರ್‌ಟಿಸಿಯಲ್ಲಿ 107/1ಎಚ್ ಎಂದು ನಮೂದಿಸುವ ಬದಲು 107/14 ಎಂದು ತಪ್ಪಾಗಿ ನಮೂದಾಗಿತ್ತು. ಇದನ್ನು ಸರಿ ಮಾಡುವ ದೃಷ್ಟಿಯಿಂದ ತಾಯಿ ವೆರೋನಿಕ ರೊಡ್ರಿಗಸ್ ಅವರ ಹೆಸರಿನಲ್ಲಿ 2018ರ ಜೂನ್ 12ರಂದು ಬಂಟ್ವಾಳ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಸರಿ ಮಾಡುವಂತೆ ತಹಶೀಲ್ದಾರ್ ಅವರು 2019ರ ಮೇ 17ರಂದು ಆದೇಶಿಸಿದ್ದರು.

    ಬಳಿಕ ಈ ಕಡತ ಪರಿಶೀಲನೆಗೆ ಮೇರಮಜಲು ಗ್ರಾಮಕರಣಿಕರ ಕಚೇರಿಗೆ ಬಂದಿತ್ತು. ಅಲ್ಲಿಂದ ಶಿಫಾರಸ್ಸು ವರದಿಯೊಂದಿಗೆ ಗ್ರಾಮಕರಣಿಕರ ಕಚೇರಿಗೆ ತೆರಳಿದ್ದು, ಅಲ್ಲಿ ಗ್ರಾಮಕರಣಿಕರು ಒಂದು ವರ್ಷಗಳ ಕಾಲ ತಮ್ಮಲ್ಲೇ ಇಟ್ಟುಕೊಂಡು ಬಳಿಕ ಅನುಮೋದನೆಗೆ ಉಪತಹಶೀಲ್ದಾರ್ ಅವರಿಗೆ ಕಳುಹಿಸಿದ್ದರು. ಆದರೆ ಅವರು ತಿದ್ದುಪಡಿಯ ಕಡತಕ್ಕೆ ಸಹಿ ಹಾಕಿರಲಿಲ್ಲ. ಹೀಗಾಗಿ ದೂರುದಾರರು ಹಲವು ಬಾರಿ ಉಪತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಕಡತವನ್ನು ಕಳುಹಿಸಿಕೊಡಲು ವಿನಂತಿಸುತ್ತಿದ್ದರು. ಕೊನೆಗೆ ಅವರು ಸಹಿ ಹಾಕುವುದಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು.  ಅದರಂತೆ ಇಂದು ಲಂಚ ಪಡೆದುಕೊಳ್ಳುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply