Connect with us

LATEST NEWS

ಆಟೋದಲ್ಲಿ ಸಂಚಾರಕ್ಕೆ ಅವಕಾಶ ನಿರಾಕರಿಸಿದ್ದಕ್ಕೆ ನಾಲ್ಕು ಆಟೋ ಖರೀದಿಸಿ ಬಾಡಿಗೆಗೆ ಬಿಟ್ಟ ಅನಿ ಮಂಗಳೂರು

ಮಂಗಳೂರು ಜೂನ್ 24: ಮನೆಗೆ ಹೋಗಲು ಆಟೋ ರಿಕ್ಷಾದಲ್ಲಿ ತನ್ನನ್ನು ಹತ್ತಿಸಿಕೊಳ್ಳದ್ದಕ್ಕೆ ಅವಮಾನಗೊಂಡ ಮಂಗಳಮುಖಿಯರೊಬ್ಬರು ಇದೀಗ ನಾಲ್ಕು ಆಟೋ ಗಳನ್ನು ಖರೀದಿ ಅದನ್ನು ಬಾಡಿಗೆ ಬಿಟ್ಟಿದ್ದಾರೆ.
ಇಂದಿನ ಆಧುನಿಕ ಯುಗದಲ್ಲೂ ಕೂಡ ಮಂಗಳಮುಖಿಯರನ್ನು ತಾತ್ಸಾರದಿಂದ ಕಾಣುವುದನ್ನು ಜನ ಇನ್ನೂ ಬಿಟ್ಟಿಲ್ಲ. ಅವರು ಕೂಡ ಎಲ್ಲರಂತೆ ಅನ್ನುವ ಧೋರಣೆ ಇನ್ನೂ ಜನರ ಮನಸ್ಸಿಗೆ ಬಂದಿಲ್ಲ. ಪ್ರತಿ ಹೆಜ್ಜೆಯಲ್ಲಿಯೂ ಅವಮಾನ ಅನುಭವಿಸುತ್ತಿದ್ದಾರೆ. ಇದೇ ರೀತಿಯ ಅವಮಾನವೊಂದು ಮುಂಗಳಮುಖಿಯೊಬ್ಬರಿಗೆ ತಾವೇ ಆಟೋರಿಕ್ಷಾ ಖರೀದಿಸಿ ಬಾಡಿಗೆ ಬಿಡುವಂತೆ ಮಾಡಿ, ತಮ್ಮನ್ನು ಅವಮಾನಿಸಿದವರಿಗೆ ಸರಿಯಾದ ಉತ್ತರ ನೀಡುವಂತೆ ಮಾಡಿದೆ.


ಇವರು ಹೆಸರು ಅನಿ ಅಂತ, ಮೂಲತಃ ರಾಯಚೂರಿನವರು. ಮಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಬಂದ ಇವರು ಇದೀಗ ಇಲ್ಲಿಯೇ ನೆಲೆ ನಿಂತಿದ್ದಾರೆ. ಬಿಎ ಬಳಿಕ ಬಿಎಡ್ ಎರಡು ಸೆಮಿಸ್ಟರ್ ಬರೆದ ಇವರು ಮಂಗಳಮುಖಿಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಕಷ್ಟ ಎಂದು ಅರಿತು ಶಿಕ್ಷಣ ಮೊಟಕುಗೊಳಿಸಿದ್ದರು.


ಅನಿ ಅವರು ಸಂಜೆ ಮನೆಗೆ ತೆರಳಲು ಬಾಡಿಗೆ ರಿಕ್ಷಾಗಳನ್ನು ಅವಲಂಭಿಸಿದ್ದರು. ಆದರೆ ಪ್ರತಿಬಾರಿಯೂ ಮನೆಗೆ ತೆರಳಲು ಆಟೋ ರಿಕ್ಷಾಗಳನ್ನು ನಿಲ್ಲಿಸಲು ಪ್ರಯತ್ನಿಸಿದರೆ ನಿಲ್ಲಿಸದೆ ಹೋಗುತ್ತಿದ್ದರು. ಒಂದು ದಿನ ಸಂಜೆಯಿಂದ ರಾತ್ರಿಯಾದರೂ ಯಾವ ರಿಕ್ಷಾದವರೂ ಇವರನ್ನು ಆಟೋದೊಳಗೆ ಹತ್ತಿಸಿಕೊಳ್ಳಲು ಒಪ್ಪಿರಲಿಲ್ಲ. ಇದರಿಂದ ಅವರು ಮನೆಗೆ ನಡೆದುಕೊಂಡೇ ಹೋಗಬೇಕಾಯಿತು. ಆ ದಿನ ಅವರು ರಿಕ್ಷಾ ಖರೀದಿಸಿ ಬಾಡಿಗೆ ನೀಡುವ ನಿರ್ಧಾರ ಕೈಗೊಂಡರು.


ಅದರಂತೆ ಅವರು ಬ್ಯಾಂಕ್​ನಲ್ಲಿ ಸಾಲ ಮಾಡಿ ನಾಲ್ಕು ರಿಕ್ಷಾಗಳನ್ನು ಖರೀದಿಸಿದ್ದಾರೆ. ನಾಲ್ಕು ರಿಕ್ಷಾಗಳನ್ನು ಮಂಗಳೂರಿನ ಗ್ರಾಮಾಂತರ ಭಾಗವಾದ ದೇರಳಕಟ್ಟೆಯಲ್ಲಿ ಬಾಡಿಗೆಗೆ ನೀಡಿದ್ದಾರೆ. ಇದರಿಂದ ಅವರಿಗೆ ಒಂದು ನಿಶ್ಚಿತ ಆದಾಯವೂ ಬರುತ್ತಿದೆ. ತನಗೆ ರಿಕ್ಷಾ ಹತ್ತಿಸಿಕೊಳ್ಳದೆ ಆದ ಅವಮಾನ, ಸಂಕಷ್ಟ ಬೇರೆ ಮಂಗಳಮುಖಿಯರಿಗೆ ಬರಬಾರದೆಂದು ಅನಿ ಅವರು ಈ ನಿರ್ಧಾರ ಮಾಡಿದ್ದಾರೆ.


ಇನ್ನು ತಾವು ಬಾಡಿಗೆಗೆ ಬಿಟ್ಟಿರುವ ಆಟೋದಲ್ಲಿ ಪ್ರಯಾಣಿಸುವ ಗರ್ಭಿಣಿಯರಿಗೆ ಮತ್ತು ಹಿರಿಯ ಮಂಗಳಮುಖಿಯರಿಗೆ ರಿಕ್ಷಾದಲ್ಲಿ ಸೇವೆ ಉಚಿತವಾಗಿರಲಿದೆ. ಈ ನಾಲ್ಕು ರಿಕ್ಷಾದಲ್ಲಿಯೂ ಉಚಿತ ಸೇವೆ ಇರಲಿದೆ. ಈ ಬಗ್ಗೆ ತಮ್ಮ ಎಲ್ಲಾ ರಿಕ್ಷಾ ಚಾಲಕರಿಗೆ ಅನಿ ಅವರು‌ ನಿರ್ದೇಶನ ಸಹ ನೀಡಿದ್ದಾರೆ. ಅಲ್ಲದೇ, ಕಷ್ಟದಲ್ಲಿರುವವರಿಗೆ ಸಹಾಯ ಹಾಗೂ ನಿರ್ಗತಿಕರಿಗೆ ಅನ್ನದಾನವನ್ನು ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.
ಅನಿ ಎಲ್ಲಾ ಮಂಗಳಮುಖಿಯರಂತೆ ಕಷ್ಟಗಳನ್ನು ಎದುರಿಸಿದ್ದಾರೆ. ಆದರೆ ಯಾವುದೇ ಕಷ್ಟಕ್ಕೂ ಅಂಜಿಕೊಳ್ಳದೆ ಮುಂದುವರೆದಿದ್ದಾರೆ. ಈಗಾಗಲೇ ಶಿವಲೀಲಾ ಎಂಬ ಕನ್ನಡ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಜಿಮ್ ಟ್ರೈನರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ಓಡಾಟಕ್ಕೆ ಟೂ ವ್ಹೀಲರ್ ಖರೀದಿಸಿದ್ದಾರೆ. ಇವರಿಗೆ ಹಿರಿಯ ಮಂಗಳಮುಖಿಯರಿಗೆ ಆಶ್ರಮ ಸ್ಥಾಪಿಸುವ ಗುರಿ ಇದ್ದು, ಇದಕ್ಕಾಗಿ ಪ್ರಯತ್ನ ಮುಂದುವರೆಸಿದ್ದಾರೆ

ಅನಿ ಮಂಗಳೂರು ಅವರು ತನ್ನ ಸಾಧನೆಯ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಛಲದಿಂದ ಸಾಧನೆಯ ಶಿಖರವನ್ನೇರಿದ್ದಾರೆ. ಅವಮಾನವನ್ನು ಗುರಿ ಸಾಧಿಸಲು ಮೆಟ್ಟಿಲನ್ನಾಗಿ ಬಳಸಿಕೊಂಡಿರುವ ಅನಿ ಮಂಗಳೂರು ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *