BANTWAL
ಅಡಿಕೆ ಕೀಳುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಮೃತ್ಯು
ಬಂಟ್ವಾಳ, ಜೂನ್ 09 : ಅಡಿಕೆ ಮರದಿಂದ ಅಡಿಕೆ ತೆಗೆಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮಲಾಯಿಬೆಟ್ಟು ಎಂಬಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ವರದಿಯಾಗಿದೆ.
ಬೋಳಿಯಾರು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ (29)ಮೃತ ಯುವಕ ಎಂದು ತಿಳಿದು ಬಂದಿದೆ. ಸಜೀಪ ಮುನ್ನೂರು ಗ್ರಾಮದ ಮೂಸಬ್ಬ ಎಂಬವರ ತೋಟದಲ್ಲಿ ಅಡಿಕೆ ಕೀಳುವ ವೇಳೆ ಸುಮಾರು 11.15 ರ ಆಸುಪಾಸಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಾಫಿ ಅವರು ಕಳೆದ ಅನೇಕ ವರ್ಷಗಳಿಂದ ಅಡಿಕೆ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ವರ್ಷಂಪ್ರತಿ ಅಡಿಕೆಯನ್ನು ಗಿಡದಿಂದಲೇ ಕ್ರಯಕ್ಕೆ ಪಡೆದು ಅ ಬಳಿಕ ಅಡಿಕೆ ಕೀಳುವುದನ್ನು ಇವರು ಮಾಡುತ್ತಾ ಬಂದಿದ್ದರು.
ಈ ವರ್ಷ ಅಡಿಕೆ ಕೀಳಲು ಸಾವಿರಾರು ರೂ ನೀಡಿ ಹೊಸ ಪೈಬರ್ ಸಲಕೆಯನ್ನು ಖರೀದಿ ಮಾಡಿದ್ದರು. ಇಂದು ಅದೇ ಹೊಸ ಸಲಕೆಯಲ್ಲಿ ಮಲಾಯಿಬೆಟ್ಟುವಿನ ತೋಟದಲ್ಲಿ ಅಡಿಕೆ ಕೀಳುವ ವೇಳೆ ಶಾಫಿ ಅವರ ಕೈಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗಿದೆ. ಪೈಬಲ್ ಸಲಕೆಯಲ್ಲಿ ಅಡಿಕೆ ಕೀಳಲು ಅಳವಡಿಸಿದ ಕಬ್ಬಿಣದ ಕತ್ತಿಯ ಮೂಲಕ ವಿದ್ಯುತ್ ಹರಿದು ಶಾಫಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಸಜೀಪಮುನ್ನೂರು ಗ್ರಾಮಕರಣಿಕೆ ಸ್ವಾತಿ, ಮೆಸ್ಕಾಂ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
You must be logged in to post a comment Login