LATEST NEWS
ಬಪ್ಪ ಬ್ಯಾರಿ ಕಿರು ಯಕ್ಷಗಾನದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ..!?

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಯಕ್ಷಗಾನ ಮತ್ತು ಬ್ಯಾರಿ ಸಂಬಂಧ’ ವಿಚಾರ ಸಂಕಿರಣ ‘ಬೆಲ್ಕಿರಿ’ ದ್ವೈಮಾಸಿಕ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಆಯೋಜಿಸಲಾದ ‘ಬಪ್ಪ ಬ್ಯಾರಿ’ ಕಿರು ಯಕ್ಷಗಾನ ಪ್ರದರ್ಶನದಲ್ಲಿ ಹಿಂದೂಗಳ ಆರಾಧ್ಯ ದೇವಿಯನ್ನು ಸಂಭಾಷಣೆ ಸಂದರ್ಭ ಅವಹೇಳನ ಮಾಡಲಾಗಿದೆಯೇ ಎನ್ನುವ ಬಗ್ಗೆ ವಿವಾದ ಎದ್ದಿದೆ. ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರಿನ ತುಳು ಸಾಹಿತ್ಯ ಅಕಾಡೆಮಿಯ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ವಿದ್ಯಾಮಾನ ನಡೆದಿದೆ. ಬಪ್ಪ ಬ್ಯಾರಿಯ ಸಂಕಷ್ಟ ಸಂದರ್ಭದಲ್ಲಿ ಪ್ರತ್ಯಕ್ಷಳಾಗುವ ಬಪ್ಪಬ್ಯಾರಿಗೆ ದೇವಿ ದೇವಸ್ಥಾನವನ್ನು ಕಟ್ಟಿಸು ಎಂದು ಆದೇಶ ನೀಡಿ ಮಾಯವಾಗುತ್ತಾಳೆ. ಬಳಿಕ ಬಪ್ಪ ಬ್ಯಾರಿ ಮತ್ತು ಉಸ್ಮಾನ್ನ ಸಂಭಾಷಣೆಯಲ್ಲಿ ದೇವಿಯನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೇವಸ್ಥಾನವನ್ನು ಕಟ್ಟಿಸಲು ಹಣವಿಲ್ಲವೆಂದಾಗ ಉಸ್ಮಾನ್ ದೇವಿಯ ಕಿರೀಟವನ್ನು ಗುಜರಿಗೆ ಮಾರುವ ಎಂದು ಹೇಳುವುದು, ದೇವಿಯನ್ನು ಬೇಬಿ ಎಂದು ಹೇಳುವುದು ಹೀಗೆ ಸಂಭಾಷಣೆಯ ಪದಗಳು ವಿವಾದ ಸೃಷ್ಟಿಸಿವೆ.

ಇತ್ಯಾದಿ ವಿಚಾರಗಳು ಹಾಸ್ಯಕ್ಕಿಂತಲೂ ಹಿಂದೂಗಳ ಭಾವನೆಯನ್ನು ಅವಹೇಳನಕಾರಿಯಾಗಿ ಪ್ರದರ್ಶಿಸಲಾಗಿದೆಯೇ ಎನ್ನುವ ಪ್ರಶ್ನೆ ಯಕ್ಷಗಾನ ಪ್ರಿಯರಲ್ಲಿ ಕಾಡಿದೆ. ಸರ್ಕಾರಿ ಸಂಸ್ಥೆಯಾದ ಬ್ಯಾರಿ ಸಾಹಿತ್ಯ ಅಕಾಡೆಮಿ ಸರ್ಕಾರಿ ಖರ್ಚಿನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಇಂತಹ ಸಂಭಾಷಣೆಗಳಿಂದ ಜನತೆ ಯಕ್ಷಗಾನ ಪ್ರದರ್ಶನಗಳಿಂದ ರೋಸಿ ಹೋಗುತ್ತಿದ್ದು, ಮೇರು ಕಲಾವಿದರ ಹಾಸ್ಯ ಅಪಹಾಸ್ಯವಾಗುವುದಕ್ಕೆ ಸಾರ್ವಜನಿಕರು ಹಾಗೂ ಯಕ್ಷ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.