Connect with us

    LATEST NEWS

    ಪತಿಯನ್ನು ಕೊಂದು ಆತ್ಮಹತ್ಯೆ ಕಥೆ ಕಟ್ಟಿದ ಪತ್ನಿ ಪೊಲೀಸ್ ವಶಕ್ಕೆ

    ಉಡುಪಿ ಅಕ್ಟೋಬರ್ 22: ಉಡುಪಿ ಅಂಪಾರಿನಲ್ಲಿ ನಡೆದ ಆತ್ಮಹತ್ಯಾ ಪ್ರಕರಣದಲ್ಲಿ ರೋಚಕ ಟ್ವಿಸ್ಟ್ ಬಂದಿದ್ದು, ಪತಿಯನ್ನೇ ಕೊಂದು, ಆತ್ಮಹತ್ಯೆ ಕಥೆ ಕಟ್ಟಿದ ಪತ್ನಿ ಹಾಗೂ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


    ಅಂಪಾರಿನ ವಿವೇಕನಗರದ ನಾಗರಾಜ‌(36) ಕೊಲೆಯಾದ ವ್ಯಕ್ತಿ, ನಾಗರಾಜ್ ಪತ್ನಿಯಾಗಿದ್ದ ಆರೋಪಿ ಮಮತಾ ಮತ್ತು ಆಕೆಯ ಸ್ನೇಹಿತರಾದ ಕುಮಾರ್ ಮತ್ತು ದಿನಕರ್ ಅವರನ್ನು ಬಂಧಿಸಲಾಗಿದೆ. ಕೊಲೆಯಲ್ಲಿ ಭಾಗಿಯಾಗಿರುವ ಇಬ್ಬರು ಅಪ್ರಾಪ್ತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.

    ಅಕ್ಟೋಬರ್ 18 ರಂದು ವಿಪರೀತ ಮದ್ಯ ವ್ಯಸನಿಯಾಗಿದ್ದ ನಾಗರಾಜ್ ತನ್ನ ಜೀವನದ ಬಗ್ಗೆ ಜಿಗುಪ್ಸೆಗೊಂಡಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಮೃತರ ಸಹೋದರಿ ಶಿವಮೊಗ್ಗದ ಸಾಗರ ತಾಲೂಕಿನ ಮಾಲ್ವೆಯ ನಿವಾಸಿ ನಾಗರತ್ನ ಮತ್ತು ಇತರ ಕೆಲವು ಸಂಬಂಧಿಕರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

    ಶಂಕರನಾರಾಯಣ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿರುವ ಮೃತದೇಹದಲ್ಲಿ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳನ್ನು ಹೊಂದಿರುವುದನ್ನು ಕುಟುಂಬ ಸದಸ್ಯರು ಗಮನಿಸಿದ್ದು ಕೊಲೆ ಎಂದು ಶಂಕಿಸಿ ನಾಗರತ್ನ ಅವರು ಪೊಲೀಸರಿಗೆ ದೂರು ನೀಡಿದ್ದರು.

    ನಾಗರಾಜ್ ಕೆಲ ದಿನಗಳ ಹಿಂದೆ ತನ್ನ ಪತ್ನಿ ಮತ್ತು ಇತರರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಸಹೋದರಿಗೆ ಕರೆ ಮಾಡಿ ನೋವು ತೋಡಿಕೊಂಡಿದ್ದರು. . ಇದೀಗ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ನಾಗರಾಜ್ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಮಮತಾಳನ್ನು ಪ್ರೀತಿಸಿದ ನಂತರ ಆತ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳಿದ್ದಾರೆ. ನಾಗರಾಜ್ ನಿತ್ಯ ಕುಡುಕನಾಗಿದ್ದು, ಆತನ ಮನೆಯಲ್ಲಿ ದಿನವೂ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply