LATEST NEWS
ಮೇಘಾಲಯದ ಹನಿಮೂನ್ ದುರಂತ – ಗಂಡನನ್ನು ಹನಿಮೂನ್ ಗೆ ಕರೆದುಕೊಂಡ ಹೋಗಿ ಬಾಡಿಗೆ ಹಂತಕರಿಂದ ಮುಗಿಸಿದ ಹೆಂಡತಿ

ಇಂದೋರ್ ಜೂನ್ 09: ಭಾರೀ ಕುತೂಹಲ ಮೂಡಿಸಿದ ಮೇಘಾಲಯದ ಹನಿಮೂನ್ ದುರಂತ ಪ್ರಕರಣದಲ್ಲಿ ಇದೀಗ ಯಾರೂ ಉಹಿಸದ ಟ್ವಿಸ್ಟ್ ಸಿಕ್ಕಿದ್ದು, ಕನ್ನಡದ ಬಾ ನಲ್ಲೆ ಮುಧುಚಂದ್ರಕ್ಕೆ ಎಂಬ ಸಿನೆಮಾ ರೀತಿಯಲ್ಲಿ ಪ್ರಕರಣ ನಡೆದಿದ್ದು, ಇಲ್ಲಿ ಹೆಂಡತಿಯೇ ಗಂಡನನ್ನು ಮುಗಿಸಿದ್ದಾಳೆ.
ಮೇ11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಧ್ಯಪ್ರದೇಶದ ಇಂದೋರ್ನ ರಾಜ ರಘುವಂಶಿ ಮತ್ತು ಸೋನಮ್ ದಂಪತಿ, ಹನಿಮೂನ್ಗೆಂದು ಮೇಘಾಲಯಕ್ಕೆ ತೆರಳಿದ್ದರು. ಆದರೆ, ಅಲ್ಲಿ ಪತಿ ಶವವಾಗಿ ಪತ್ತೆಯಾದರೆ, ಪತ್ನಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಇಡೀ ಪ್ರಕರಣ ದೇಶದಲ್ಲೇ ಸುದ್ದಿ ಮಾಡಿತ್ತು, ಆದರೆ ಇದೀಗ ಹೆಂಡತಿಯೇ ಗಂಡನನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತನಿಖೆಯಲ್ಲಿ ತಿಳಿದು ಬಂದಿದ್ದು, ಈ ಹಿನ್ನಲೆ ಹೆಂಡತಿ ಸೋನಂ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಶನಿವಾರ ರಾತ್ರಿ ಘಾಜಿಪುರದ ‘ಧಾಬಾ’ದಲ್ಲಿ ಸೋನಮ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಘಾಜಿಪುರ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಪೊಲೀಸರ ಮುಂದೆ ಶರಣಾದರು ಮತ್ತು ನಂತರ ಆಕೆಯನ್ನು ಅರೆಸ್ಟ್ ಮಾಡಲಾಗಿದೆ.
ಮೇಘಾಲಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಇದಶಿಶಾ ನೊಂಗ್ರಾಂಗ್ ಅವರು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ಸೋನಂ ಅರೆಸ್ಟ್ ಮಾಡಿದ ಬಳಿಕ ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಇತರ ಮೂವರಪು ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ವ್ಯಕ್ತಿ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದ್ದರೆ, ಉಳಿದ ಇಬ್ಬರನ್ನು ಇಂದೋರ್ನಿಂದ ಬಂಧಿಸಲಾಗಿದೆ. ಸೋನಮ್ ತನ್ನ ಗಂಡನನ್ನು ಕೊಲ್ಲಲು ತಮ್ಮನ್ನು ನೇಮಿಸಿಕೊಂಡಿದ್ದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಏನಿದು ಪ್ರಕರಣ
ಮೇ 11ರಂದು ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದ ಮಧ್ಯಪ್ರದೇಶದ ಇಂದೋರ್ ನ ರಾಜಾ ರಘುವಂಶಿ(29) ಮತ್ತು ಸೋನಮ್ ರಘುವಂಶಿ(25), ಮೇ 20ರಂದು ಹನಿಮೂನ್ ಪಯಣ ಆರಂಭಿಸುತ್ತಾರೆ. ಮೇ 21ರಂದು ಮೇಘಾಲಯದ ರಾಜಧಾನಿ ಶಿಲ್ಲಾಂಗ್ನ ಬಾಲಾಜಿ ಅತಿಥಿ ಗೃಹದಲ್ಲಿ ತಂಗುತ್ತಾರೆ. ಬಳಿಕ ಮೇ 22ರ ಬೆಳಿಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದ ದಂಪತಿ, ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ (ಚಿರಾಪುಂಜಿ) ತೆರಳುತ್ತಾರೆ. ಈ ವೇಳೆ ಅವರು ಎರಡು ಲಗೇಜ್ ಬ್ಯಾಗ್ ಅನ್ನು ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25 ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದ ಅವರು ಕೊಠಡಿ ಬೇಕಾದಲ್ಲಿ ಕರೆ ಮಾಡುವುದಾಗಿಯೂ ಹೇಳಿದ್ದರು. ಮೇ 23 ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್ನ ಶಿಪಾರಾ ಹೋಂಸ್ಟೇಯಲ್ಲಿ ತಂಗುತ್ತಾರೆ. ಆ ವೇಳೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುತ್ತಾರೆ. ಮೇ 24 ರಂದು ದ್ವಿಚಕ್ರ ವಾಹನವೊಂದು ಶಿಲ್ಲಾಂಗ್ನಿಂದ ಸೊಹ್ರಾಗೆ ಹೋಗುವ ರಸ್ತೆಯ ಕೆಫೆಯೊಂದರ ಬಳಿ ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಈ ವೇಳೆ ನಾಪತ್ತೆಯಾಗಿದ್ದಾರೆ ಎಂದು ದಂಪತಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದಂಪತಿಯನ್ನು ಸುರಕ್ಷಿತವಾಗಿ ಪತ್ತೆ ಮಾಡುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮೇಘಾಲಯ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತಾರೆ. ಇದರ ಬೆನ್ನಲ್ಲೇ ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ದಂಪತಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸುತ್ತಾರೆ. ಶೋಧ ಕಾರ್ಯಾಚರಣೆಗಾಗಿ ಡೋನ್ಗಳು, ಸ್ನಿಫರ್ ನಾಯಿಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ.
ಮೇ 25 ರಂದು ಸ್ಕೂಟರ್ ಮಾಲೀಕರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗುವ ಸೊಹ್ರಾ ಪೊಲೀಸ್ ಠಾಣೆಯ ಪೊಲೀಸರು, ಅದು ಕಾಣೆಯಾದ ರಘುವಂಶಿ ದಂಪತಿ ಬಾಡಿಗೆಗೆ ಪಡೆದಿದ್ದ ಸ್ಕೂಟರ್ ಎಂದು ಧೃಡಪಡಿಸುತ್ತಾರೆ. ಜೂನ್ 2 ರಂದು ವೀ ಸಾವ್ಹಾಂಗ್ ಜಲಪಾತದ ಕೆಳಗಿನ ಕಮರಿಯಲ್ಲಿ ಶವವಿರುವುದನ್ನು ಡೋನ್ ಪತ್ತೆ ಮಾಡುತ್ತದೆ. ಅದು ರಾಜ ರಘುವಂಶಿ ಮೃತದೇಹವೆಂದು ಕುಟುಂಬದವರು ಗುರುತಿಸುತ್ತಾರೆ. ಬಳಿಕ ನಾಪತ್ತೆಯಾಗಿರುವ ಸೋನಂ ಗಾಗಿ ಹುಡುಕಾಟ ಮುಂದುವರೆಯುತ್ತದೆ.
ಈ ನಡುವೆ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಗುವ ರೀತಿಯಲ್ಲಿ ನಾಪತ್ತೆಯಾಗಿರುವ ಮಹಿಳೆ ಮೂವರ ಜೊತೆ ನೋಡಿರುವುದಾಗಿ ಮೇಘಾಲಯದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಆದರೂ ಸೋನಂ ಮಾತ್ರ ಪತ್ರೆಯಾಗಿರಲಿಲ್ಲ. ಇದೀಗ ಸೊನಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಅಲ್ಲದೆ ಗಂಡನನ್ನು ಕೊಲ್ಲಿಲು ಆಕೆ ನೇಮಿಸಿದ ಬಾಡಿಗೆ ಹಂತಕರೂ ಸಿಕ್ಕಿಬಿದ್ದಿದ್ದಾರೆ. ಇನ್ನು ಯಾವ ಕಾರಣಕ್ಕೆ ಆಕೆ ಗಂಡನನ್ನು ಕೊಂದಿದ್ದಾಳೆ ಎನ್ನುವುದು ಇನ್ನೂ ವಿಚಾರಣೆ ಮೂಲಕ ತಿಳಿದು ಬರಬೇಕಾಗಿದೆ.
ಕನ್ನಡದ ಬಾನಲ್ಲೆ ಮಧುಚಂದ್ರಿಕೆ ಸಿನೆಮಾ ರೀತಿಯೇ ಈ ಪ್ರಕರಣ ನಡೆದಿದ್ದು, ಕುತೂಹಲಕಾರಿಯಾಗಿದೆ.