LATEST NEWS
ಮೃತ ಶರೀರದೊಂದಿಗೆ ಅಮಾನವೀಯವಾಗಿ ವರ್ತಿಸುವುದು ಪೈಶಾಚಿಕತೆ- ಯು.ಟಿ ಖಾದರ್

ಮೃತ ಶರೀರದೊಂದಿಗೆ ಅಮಾನವೀಯವಾಗಿ ವರ್ತಿಸುವುದು ಪೈಶಾಚಿಕತೆ- ಯು.ಟಿ ಖಾದರ್
ಮಂಗಳೂರು ಎ.24: ಕೊರೊನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯ ಅಂತ್ಯಸಂಸ್ಕಾರ ವಿಚಾರದಲ್ಲಿ ದ.ಕ ಜಿಲ್ಲೆಯಲ್ಲಿ ನಿನ್ನೆ ನಡೆದ ಗೊಂದಲಗಳ ವಿರುದ್ದ ಶಾಸಕ ಯು.ಟಿ ಖಾದರ್ ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಶರೀರದೊಂದಿಗೆ ಅಮಾನವೀಯವಾಗಿ ವರ್ತಿಸುವುದು ಪೈಶಾಚಿಕತೆ. ನಮ್ಮ ಜಿಲ್ಲೆಯಲ್ಲಿ ನಿನ್ನೆ ನಡೆದ ಅಮಾನವೀಯ ಘಟನೆ ನಿಜಕ್ಕೂ ದುಖಕರ ಎಂದ ಅವರು ಅದರಲ್ಲೂ ಶಾಸಕರುಗಳೇ ಮುಂದೆ ನಿಂತು ಶವ ಸಂಸ್ಕಾರಕ್ಕೂ ಅನುಮತಿ ನೀಡದೇ ಇರೋದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಘಟನೆ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಖಾದರ್ ನಿನ್ನೆ ಕೋವಿಡ್ ನಿಂದ ಮೃತಪಟ್ಟ ತಾಯಿಯ ಶವ ಸಂಸ್ಕಾರಕ್ಕೆ ರಾತ್ರಿಯಿಡಿ ಪರದಾಡುವಂತಾಗಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಹದ್ದು. ‘ಇಂತಹ ಪರಿಸ್ಥಿತಿಯಲ್ಲಿ ಜನ ಭಯಬಿದ್ದು ಪ್ರತಿಭಟಿಸುವುದು ಸಾಮಾನ್ಯ. ಆದರೆ ಘಟನೆಯ ವಿವರದ ಜತೆ ಸಮಸ್ಯೆಯ ವೈಜ್ಙಾನಿಕ ಪರಿಹಾರ ನೀಡಿ ಜನರನ್ನ ಜಾಗೃತಗೊಳಿಸುವುದು ಶಾಸಕರ ಕರ್ತವ್ಯ’ ಎಂದಿದ್ದಾರೆ.
‘ಅದರೆ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾವಂತ ಶಾಸಕರು ಸಾವಿನಲ್ಲೂ ಲೆಕ್ಕಾಚಾರ ಹಾಕಿರುವುದು ಸರಿಯಲ್ಲ. ಧರ್ಮ ಯಾವುದೇ ಇರಲಿ ಸಾವು ಸಂಭವಿಸಿದಾಗ ನಾವು ಗೌರವದಿಂದ ಬಿಳ್ಕೊಡಬೇಕೇ ವಿನಹ ದಾರಿಯಲ್ಲಿ ಶವ ನಿಲ್ಲಿಸಿ ರಾಜಕೀಯ ಮಾಡುವುದು ಸಲ್ಲ’.
‘ಅದು ನಮ್ಮ ಸಂಸ್ಜೃತಿಯೂ ಅಲ್ಲ. ಕಳೆದ ಒಂದು ತಿಂಗಳಿನಿಂದ ದಿನಕ್ಕೆರಡು ಬಾರಿ ಸಭೆ ನಡೆಸುವ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸ್ಥಳಿಯ ಸಂಸದರು,ಶಾಸಕರು ಕೋವಿಡ್ ಪೀಡಿತರ ಶವ ಸಂಸ್ಕಾರದ ವ್ಯವಸ್ಥೆ ಮಾಡಲೂ ವಿಫಲರಾಗಿರುವುದಕ್ಕೆ ಉತ್ತರಿಸುವಿರಾ?.
ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಘಟನೆ ರಾಜ್ಯದ ಇತರ ಭಾಗದಲ್ಲಿ ನಡೆಯೋ ಮುನ್ನ ಆರೋಗ್ಯ ಹಾಗೂ ಕಂದಾಯ ಸಚಿವರು ಎಚ್ಚೆತ್ತುಕೊಳ್ಳುವುದು ಒಳಿತು’ ಎಂದು ಶಾಸಕ ಯುಟಿ ಖಾದರ್ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.