LATEST NEWS
ಉಳ್ಳಾಲ ಗ್ಯಾಂಗ್ ರೇಪ್ ಪ್ರಕರಣ – ಮೂರನೇ ಆರೋಪಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಸಂಗ್ರಹಿಸಲು ಪೊಲೀಸರಿಗೆ ಹೈಕೋರ್ಟ್ ಸೂಚನೆ

ಮಂಗಳೂರು ಎಪ್ರಿಲ್ 23: ಉಳ್ಳಾಲದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಅರೆಸ್ಟ್ ಮಾಡಿರುವ ಮೂರನೇ ಆರೋಪಿಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ಗಳನ್ನು ಸಂಗ್ರಹಿಸಲು ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಎಪ್ರಿಲ್ 16ರಂದು ರಾತ್ರಿ ಉಳ್ಳಾಲದಲ್ಲಿ ಗ್ಯಾಂಗ್ ರೇಪ್ ನಡೆಸಿದ್ದಾಗಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮೂರನೇ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ ಮನೀಶ್ ಅಂದು ಮಂಗಳೂರು ಬಿಟ್ಟು ಉಳ್ಳಾಲಕ್ಕೆ ಹೋಗಿರಲಿಲ್ಲ. ಅಲ್ಲದೆ, ಈ ಕೃತ್ಯದಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಿದ್ದರೂ ಪೊಲೀಸರು ಫಿಕ್ಸ್ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಂಗಳೂರಿನ ಕೋರ್ಟಿಗೂ ಆರೋಪಿ ಪರವಾಗಿ ಅರ್ಜಿ ಸಲ್ಲಿಕೆಯಾಗಿತ್ತು.

ಮಂಗಳೂರಿನ ಉಳ್ಳಾಲದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರಾದ ವಿಕ್ರಂ ರಾಜ್ ಮತ್ತು ಅಶ್ವಿನ್ ಕುಟಿನ್ಹಾ ಇವರ ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ,ಮಂಗಳೂರಿನ ವಿವಿಧ ಭಾಗದ CCTV ದೃಶ್ಯಾವಳಿಗಳನ್ನು ಪಡೆದು , ಸಂರಕ್ಷಿಸುವಂತೆ ಮತ್ತು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ನಿರ್ದೇಶಿಸುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದು, ಮಾನ್ಯ ಉಚ್ಚ ನ್ಯಾಯಾಲಯವು ಸದರಿ ಸಿಸಿಟಿವಿ ವಿಡಿಯೋಗಳನ್ನು ಪಡೆದು , ಸಂರಕ್ಷಿಸುವಂತೆ ಮಧ್ಯಂತರ ಆದೇಶವನ್ನು ಇಂದು ಹೊರಡಿಸಿದೆ.
ಮೂರನೇ ಆರೋಪಿಯ ಪರ ವಕೀಲರು ದಿನಾಂಕ 19/04/2025 ರಂದು 3 ನೇ ಆರೋಪಿಯು ಕೃತ್ಯ ನಡೆದ ಸ್ಥಳದಲ್ಲಿ (ಉಳ್ಳಾಲ) ಮೂರನೇ ಆರೋಪಿ ಇರಲಿಲ್ಲ, ಕೃತ್ಯ ನಡೆಯಲಾಗಿದೆ ಎಂದು ಹೇಳಲಾದ ಸಮಯದಲ್ಲಿ ಆತ ಲಾಲ್ಭಾಗ್ ಪ್ರದೇಶದಲ್ಲಿ ಇದ್ದ , ಆದುದ್ದರಿಂದ ಆತ ಓಡಾಡಿದ ಲಾಲ್ ಬಾಗ್ ಪ್ರದೇಶದ CCTV ದೃಶ್ಯಾವಳಿಗಳನ್ನು ಸಂರಕ್ಷಿಸುವಂತೆ ಮತ್ತು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ನಿರ್ದೇಶಿಸುವಂತೆ ಕೋರಿ ಮಾನ್ಯ ನ್ಯಾಯಾಲಯದ ಮುಂದೆ ಹಾಕಿದ್ದ ಅರ್ಜಿಗೆ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದು ಸದರಿ ಆಕ್ಷೇಪಣೆಯಲ್ಲಿ ಮೂರನೇ ಆರೋಪಿ ಉಳ್ಳಾಲಕ್ಕೆ ಹೋಗಿಲ್ಲ , ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ ಎನ್ನುವ ಸಂಗತಿ ಹೊರಬಂದಿದೆ.
ಪೊಲೀಸರು ಹೇರಿದ ಹೊಸ ಆರೋಪದ ಪ್ರಕಾರ ಮೂರನೇ ಆರೋಪಿ ಉಳಿದಿಬ್ಬರು ಆರೋಪಿಗಳ ಜೊತೆ ಸೇರಿ ಸಂತ್ರಸ್ತೆಗೆ ಬಿಯರ್ ಕುಡಿಸಿದ್ದು , ನಂತರ ಆಕೆಯನ್ನು ಮುಟ್ಟಲು ನೋಡಿದಾಗ ಆಕೆ ಬೊಬ್ಬೆ ಹೊಡೆದ ಕಾರಣಕ್ಕೆ ಅಲ್ಲಿಂದ ಓಡಿ ಹೋಗಿರುತ್ತಾನೆ ಎಂದು ನಮೂದಿಸಿರುತ್ತಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಮೂರನೇ ಆರೋಪಿ ಘಟನಾ ಸ್ಥಳದಲ್ಲೇ ಇರಲಿಲ್ಲ ಎನ್ನುವ ವಿಚಾರ ಇದೀಗ ಕೋರ್ಟ್ ಮೆಟ್ಟಿಲೇರಿದೆ , ಅಲ್ಲದೆ ಹೊಸದಾಗಿ ಪೊಲೀಸರು ಮೂರನೇ ಆರೋಪಿ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ ಎಂದಿದ್ದು, ಪ್ರಕರಣದ ತನಿಖೆ ಬಗ್ಗೆ ಸಂಶಯ ಮೂಡಿಸುವಂತಾಗಿದೆ.