UDUPI
ಉಡುಪಿ ಜಿಲ್ಲಾಧಿಕಾರಿ ನೋಡಿದರೆ ಮಾತ್ರ ಭಯ…ಕೊರೊನಾಗೆ ಇಲ್ಲ….!!
ಉಡುಪಿ ಜುಲೈ 22: ರಾಜ್ಯಾದ್ಯಂತ ಲಾಕ್ಡೌನ್ ತೆರವಾಗಿದೆ. ಉಡುಪಿ ಜಿಲ್ಲೆಯಲ್ಲೂ ಗಡಿ ಸಿಲ್ ಆದೇಶವನ್ನು ವಾಪಸ್ ಪಡೆಯಲಾಗಿದೆ. ಈ ಹಿಂದಿನ ಆದೇಶದಂತೆ 14 ದಿನಗಳ ಕಾಲ ಹೊರ ಜಿಲ್ಲೆಯವರಿಗೆ ಉಡುಪಿಗೆ ಪ್ರವೇಶವಿರಲಿಲ್ಲ. ಆದೇಶ ವಾಪಾಸು ಪಡೆಯುತ್ತಿದ್ದಂತೆ ಜನರು ಇದರ ಲಾಭ ಪಡೆಯುತ್ತಿದ್ದಾರೆ.
ಕೋವಿಡ್ ಕಾಲದ ಕಠಿಣ ಕಾನೂನುಗಳನ್ನು ಬ್ರೇಕ್ ಮಾಡುತ್ತಿದ್ದಾರೆ. ಇದನ್ನು ಮನಗಂಡ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ನಗರದ ಆಯಕಟ್ಟಿನ ಸ್ಥಳಗಳಿಗೆ ದಾಳಿಮಾಡಿದರು. ಈ ವೇಳೆ ಸರ್ವಿಸ್ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿಗಳು ಎಂಟರ್ ಆಗುತ್ತಿದ್ದಂತೆ ಯುವಕರ ಗುಂಪೊಂದು ಏಕಾಏಕಿ ಕಾಲ್ಕಿತ್ತಿತು. ಒಂದೇ ಸಮನೆ ಕಾರ್ ನ ಎಕ್ಸಲೇಟರ್ ಏರಿಸಿ ಸ್ಥಳದಿಂದ ಪಲಾಯನಗೈದ ದೃಶ್ಯ ಕ್ಯಾಮೆರಾಗಳಲ್ಲೂ ಸೆರೆಯಾಗಿದೆ. ಮಾಸ್ಕ್ ಧರಿಸದೆ ಇರುವುದು ಮಾತ್ರವಲ್ಲ ಗಾಂಜಾ ಸೇವನೆಯಂತಹ ಕಾನೂನುಬಾಹಿರ ಕೃತ್ಯದಲ್ಲಿ ಯುವಕರ ತಂಡ ತೊಡಗಿತ್ತು ಎಂದು ಸಂಶಯಿಸಲಾಗಿದೆ. ಯುವಕರ ತಂಡವನ್ನು ಪತ್ತೆ ಮಾಡುವಂತೆ ಜಿಲ್ಲಾಧಿಕಾರಿಗಳು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಅನಿರೀಕ್ಷಿತ ದಾಳಿಯಿಂದ ಕಾರು ಚಾಲಕರು, ಅಂಗಡಿ- ಹೋಟೆಲ್ ಮಾಲಕರು, ಸಾರ್ವಜನಿಕರು ಕಸಿವಿಸಿಗೊಂಡದ್ದು ಸುಳ್ಳಲ್ಲ. ಮಸೀದಿ ರಸ್ತೆಯಲ್ಲಿರುವ ಮಾಲ್ ಒಂದಕ್ಕೆ ಜಿಲ್ಲಾಧಿಕಾರಿಗಳು ದಾಳಿ ನಡೆಸಿದ ವೇಳೆ ಅಲ್ಲಿನ ಮೆನೇಜರ್ ಗಾಬರಿಯಿಂದ ಓಡಿದ ದೃಶ್ಯ ಕಂಡುಬಂತು.” ಡಿಸಿ ಬಂದ್ರೂ ಡಿಸಿ ಬಂದ್ರು” ಎಂದು ಗ್ರಾಹಕರು ಹಾಗೂ ಸಿಬಂದಿಗಳನ್ನು ಎಚ್ಚರಿಸುವ ದೃಶ್ಯ ಕೂಡ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.ಸಾರ್ವಜನಿಕರ ವರ್ತನೆಯಲ್ಲಿ ಜಿಲ್ಲಾಡಳಿತದ ಬಗೆಗಿನ ಭಯವನ್ನು ಕಾಣಬಹುದಾದರೂ ಕೊರೋನಾ ಬಗೆಗಿನ ನಿರ್ಲಕ್ಷ್ಯ ಎದ್ದುಕಾಣುತ್ತಿತ್ತು.
You must be logged in to post a comment Login