Connect with us

    LATEST NEWS

    ಪೇಜಾವರ ಶ್ರೀ ವಿಶ್ವೇಶತೀರ್ಥ ರಿಂದ ಮಂತ್ರೋಪದೇಶ ಪಡೆದಿದ್ದ ತಪೋವನಿ ಮಾತಾಜಿ ನಿಧನ

    ಉಡುಪಿ ಫೆಬ್ರವರಿ 4: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರೋಪದೇಶ ಪಡೆದು ಸುಭದ್ರಾ ಎಂದು ಹೆಸರಿಸಲ್ಪಟ್ಟಿದ್ದ ಅಧ್ಯಾತ್ಮದ ಪಥದಲ್ಲಿ ಉನ್ನತ ಸಾಧನೆಗೈದಿದ್ದ ತಪೋವನಿ ಮಾತಾಜಿ ಯಾನೆ ಸುಭದ್ರಾ ಮಾತಾಜಿ ಅವರು ಹರಿದ್ವಾರದ ರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ . ಅವರಿಗೆ ಸುಮಾರು 89 ವರ್ಷ ವಯಸ್ಸಾಗಿತ್ತು .


    ಬಾಲ್ಯದಲ್ಲೇ ಅಧ್ಯಾತ್ಮದ ಸೆಳೆತಕೊಕ್ಕೊಳಗಾಗಿ ಉಡುಪಿಯ ಮಠ ಮತ್ತು ದೇವಾಲಯದ ಪರಿಸರದಲ್ಲೇ ಭಜನೆ ಪ್ರವಚನ ಸತ್ಸಂಗ ಮೊದಲಾದವುಗಳಲ್ಲಿ ಭಾಗಿಯಾಗುತ್ತಿದ್ದ ಸುಭದ್ರಾ ಮುಂದೆ ಪೇಜಾವರ ಶ್ರೀಗಳಲ್ಲಿ ಮಂತ್ರೋಪದೇಶ ಪಡೆದರು. ನಂತರ ಅಧ್ಯಾತ್ಮ ಸಾಧನೆಗಾಗಿ ಸುಮಾರು 50-60 ವರ್ಷಗಳ ಹಿಂದೆ ಬಹಳ ಕಷ್ಟ ಪಟ್ಟು ಉತ್ತರದ ಹಿಮಾಲಯ ಸೇರಿದ್ದ ಅವರು ಹಿಮಾಲಯದ ಗಂಗೋತ್ರಿಯಿಂದಲೂ ಬಹಳ ಎತ್ತರದ ಪ್ರದೇಶ ಪಾಂಡವರು ತಪಸ್ಸಾಚರಿಸಿದ್ದ ತಪೋವನದಲ್ಲಿ ನಿರಂತರ ಒಂಭತ್ತು ವರ್ಷಗಳ ಕಾಲ ತಪಸ್ಸಾಚರಿಸಿದ್ದರು .

    ಈ ಸಾಧನೆಗೈದ ಜಗತ್ತಿನ ಏಕೈಕ ಮಹಿಳೆ ಎನ್ನುವುದು ಹಿಮಾಲಯದ ನೂರಾರು ಸಾಧು ಸಂತರ ಅಭಿಪ್ರಾಯ‌. ಈ ಸಾಧನೆಯಿಂದಲೇ ಹಿಮಾಲಯ ಪ್ರದೇಶದಲ್ಲಿ ತಪೋವನೀ ಮಾ ಎಂದೇ ಪ್ರಸಿದ್ಧರಾಗಿದ್ದರು . ಆ ಬಳಿಕ ಹಿಮಾಲಯದ ಪ್ರದೇಶದಲ್ಲೇ ಆಶ್ರಮವೊಂದನ್ನು ತೆರೆದು ಸಾಧುಗಳಿಗೆ ಯಾತ್ರಿಗಳಿಗೆ ಊಟೋಪಚಾರ , ಆರೋಗ್ಯ ಸೇವೆಗಳನ್ನು ನಡೆಸುತ್ತಿದ್ದರು . ತೀವ್ರ ಅನಾರೋಗ್ಯಕ್ಕೊಳಗಾದ ಬಳಿಕ ಹರಿದ್ವಾರದ ಆಚಾರ್ಯ ಬಾಲಕೃಷ್ಣ ಅವರ ವಿಶೇಷ ಮುತುವರ್ಜಿಯಲ್ಲಿ ಅಲ್ಲಿನ ರಾಮಕೃಷ್ಣ ಆಶ್ರಮ ಆಸ್ಪತ್ರೆಯಲ್ಲಿ ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು .


    ಜೀವನ ಪರ್ಯಂತ ತನ್ನ ಎಲ್ಲ ಅಧ್ಯಾತ್ಮಿಕ ಸಾಧನೆಗೆ ಉಡುಪಿ ಕೃಷ್ಣ ಮತ್ತು ಪೇಜಾವರ ಶ್ರೀಗಳೇ ಕಾರಣ ಎಂದೇ ಹಿಮಾಲಯದ ಪ್ರತಿಯೊಬ್ಬರಲ್ಲೂ ಹೇಳಿಕೊಳ್ಳತ್ತಿದ್ದರು . ತಫೋವನೀ ಮಾ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ . ಉಡುಪಿ ಕೃಷ್ಣ ಮತ್ತು ತಮ್ಮ ಗುರುಗಳಲ್ಲಿ ಅನನ್ಯ ಶ್ರದ್ಧೆ ಭಕ್ತಿ ಯನ್ನು ಹೊಂದಿದ್ದ ಮಾತಾಜಿಯವರು ಕಠೋರ ಅಧ್ಯಾತ್ಮ ತುಡಿತದಿಂದ ಮಾಡಿದ ಸಾಧನೆ ಮಾದರಿ ಯಾದುದು ಅವರ ಆತ್ಮಕ್ಕೆ ಶ್ರೀ ಕೃಷ್ಣನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ .

    Share Information
    Advertisement
    Click to comment

    You must be logged in to post a comment Login

    Leave a Reply