LATEST NEWS
ಉಡುಪಿ – ಕುತ್ತಿಗೆಗೆ ಜೋಳಿಗೆ ಸಿಲುಕಿ ಒಂದು ವರ್ಷದ ಮಗು ಸಾವು

ಉಡುಪಿ ಜೂನ್ 05: ಮಗುವನ್ನು ಮಲಗಿಸಲು ಹಾಕಿದ್ದ ಜೋಳಿಗೆ ಮಗುವಿನ ಕುತ್ತಿಗೆಗೆ ಸಿಲುಕಿದ ಪರಿಣಾಮ ಒಂದು ವರ್ಷದ ಮಗು ಸಾವನಪ್ಪಿದ ಘಟನೆ ಉಡುಪಿಯ ನಿಟ್ಟೂರಿನಲ್ಲಿ ನಡೆದಿದೆ. ಪುತ್ತೂರು ಗ್ರಾಮದ ಬಾಡಿಗೆ ಮನೆ ನಿವಾಸಿ ಅಯ್ಯಪ್ಪ ಎಂಬವರ ಹೆಣ್ಣು ಮಗು ಕಾಳಮ್ಮ(1) ಮೃತಪಟ್ಟ ಮಗು.
ಉಡುಪಿಯಲ್ಲಿ 3 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಅಯ್ಯಪ್ಪ ಅವರು ನಿಟ್ಟೂರಿನಲ್ಲಿ ಗಂಗಾಧರ ಎಂಬವರ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದು, ಜೂ.4ರಂದು ಬೆಳಗ್ಗೆ 8ಕ್ಕೆ ಕೆಲಸಕ್ಕೆಂದು ಹೋಗಿದ್ದರು. ಈ ವೇಳೆ ಅವರ ಪತ್ನಿ ಮಗುವನ್ನು ಜೋಳಿಗೆಯಲ್ಲಿ ಹಾಕಿ ಬೆಳಗ್ಗೆ 9.30ಕ್ಕೆ ಕೆಲಸಕ್ಕೆ ಹೋದವರು 11.30ಕ್ಕೆ ಬಂದು ನೋಡಿದಾಗ ಮಗುವಿನ ಕುತ್ತಿಗೆಗೆ ಜೋಳಿಗೆ ಕಟ್ಟಿದ ಸೀರೆಯು ಸುತ್ತಿಕೊಂಡು ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿದೆ.

ಕೂಡಲೇ ಮಗುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯಾಧಿಕಾರಿಗಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗು ಜೋಳಿಗೆಯಿಂದ ಇಳಿಯಲು ಹೋಗಿ ಅಥವಾ ನಿದ್ರಾ ಸ್ಥಿತಿಯಲ್ಲಿ ಜೋಳಿಗೆಯಿಂದ ಬಿದ್ದು ಜೋಳಿಗೆ ಕಟ್ಟಿದ ಸೀರೆಯು ಕುತ್ತಿಗೆಗೆ ತಾಗಿ ಉಸಿರುಕಟ್ಟಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.