LATEST NEWS
ಸುಹಾಸ್ ಶೆಟ್ಟಿ ಹ**ತ್ಯೆಗೆ ಪ್ರತಿಯಾಗಿ ಉಡುಪಿಯಲ್ಲಿ ಆಟೋ ಚಾಲಕನ ಮೇಲೆ ದಾಳಿ

ಉಡುಪಿ ಮೇ 02 : ಬಜ್ಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬೆನ್ನಲ್ಲೇ ಉಡುಪಿಯಲ್ಲೂ ಹತ್ಯೆಗೆ ಪ್ರತೀಕಾರ ದಾಳಿ ನಡೆದಿದೆ. ಮೇ 01 ರಾತ್ರಿ ಸಮಯ ಸುಮಾರು 11:15 ಗಂಟೆಗೆ ಆತ್ರಾಡಿ ಪೆಟ್ರೋಲ್ ಪಂಪ್ ಬಳಿ ಆಟೋ ಚಾಲಕರೊಬ್ಬರ ಮೇಲೆ ದಾಳಿ ನಡೆಸಲಾಗಿದೆ.
ದಾಳಿಗೊಳಗಾದವರನ್ನುಆತ್ರಾಡಿಯ ಅಬೂಬಕರ್ (50) ಎಂದು ಗುರುತಿಸಲಾಗಿದ್ದು, ದಾಳಿ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಹಿರಿಯಡ್ಕ ಬೊಮ್ಮರಬೆಟ್ಟುವಿನ ಸಂದೇಶ್ (31) ಮತ್ತು ಬಾಪೂಜಿ ದರ್ಖಾಸು ನಿವಾಸಿ ಸುಶಾಂತ್ (32) ಎಂದು ಗುರುತಿಸಲಾಗಿದೆ.

ಆತ್ರಾಡಿಯ ಅಬೂಬಕರ್ (50) ಎಂಬವರು ಬಾಡಿಗೆ ನಿಮಿತ್ತ ಆತ್ರಾಡಿಯಿಂದ ಮದಗ ಕಡೆಗೆ ಮುಖ್ಯರಸ್ತೆಯಲ್ಲಿ ರಿಕ್ಷಾದಲ್ಲಿ ಆತ್ರಾಡಿ ಗ್ಯಾಸ್ ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು, ರಿಕ್ಷಾವನ್ನು ಹಿಂಬಾಲಿಸುತ್ತಿದ್ದರು. ಅಲ್ಲದೆ ಅವರು ಅಬೂಬಕರ್ ಅವರಲ್ಲಿ ರಿಕ್ಷಾವನ್ನು ನಿಲ್ಲಿಸುವಂತೆ ಬೆದರಿಸಿದರೆನ್ನಲಾಗಿದೆ. ಅಲ್ಲದೇ ರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದ್ದು, ಅಬೂಬಕರ್ ರಿಕ್ಷಾವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಮುಂದೆ ಹೋಗಿದ್ದಾರೆ
ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದಾಗ, ಬೈಕ್ ನ ಹಿಂಬದಿ ಕುಳಿತ ವ್ಯಕ್ತಿಯ ಕೈಯಲ್ಲಿ ತಲವಾರು ರೀತಿಯ ಆಯುದವಿದ್ದು, ಅವರಲ್ಲಿ ಒಬ್ಬ ವ್ಯಕ್ತಿ ಆಟೋ ಚಾಲಕನ್ನು ಉದ್ದೇಶಿಸಿ “ಆಯನ್ ಕಡುಪು ಬುಡೊಚ್ಚಿ” (ಅತನನ್ನು ಕೊಚ್ಚು, ಬಿಡಬೇಡಿ) ಎಂಬುದಾಗಿ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶೇಡಿಗುಡ್ಡೆ ಬಳಿ ರೋಸ್ ಬಸ್ಸಿನವರ ಮನೆ ಬಳಿ ಇರುವ ರಸ್ತೆಯಲ್ಲಿ ಆಟೋ ರಿಕ್ಷಾವನ್ನು ನಿಲ್ಲಿಸಿದ ಅಬೂಬಕ್ಕರ್ ಓಡಲು ಪ್ರತ್ನಿಸಿದಾಗ ಆಗ ಬೈಕ್ ನಲ್ಲಿದ್ದ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿದ್ದ ತಲವಾರಿನಿಂದ ತಲೆಗೆ ಬೀಸಿದ್ದಾನೆ. ತಲವಾರಿನ ಹೊಡೆತದಿಂದ ತಪ್ಪಿಸಿಕೊಂಡಿದ್ದು, ಇನ್ನೊಬ್ಬ ವ್ಯಕ್ತಿಯು ಬಾಟಲಿಯನ್ನು ಕೈ ಯಲ್ಲಿ ಹಿಡಿದು ಆಟೋ ರಿಕ್ಷಾದ ಮುಂಬಾಗದ ಗ್ಲಾಸಿಗೆ ಹೊಡೆದಿದ್ದಾನೆ. ಅಬುಬಕ್ಕರ್ ಅವರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ. ಬಜಪೆ ಘಟನೆಯ ಹಿನ್ನೆಲೆಯಲ್ಲಿ ಕೊಲೆ ಯತ್ನ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಉಡುಪಿ ಎಸ್ ಪಿ ಅರುಣ್ ಕುಮಾರ್ ಹೇಳಿದ್ದಾರೆ.