LATEST NEWS
ಬಾಲಸಂರಕ್ಷಣಾ ಕೇಂದ್ರದಿಂದ ದನ ಕದ್ದ ಇಬ್ಬರು ಕಳ್ಳರ ಬಂಧನ : ಕಾರು ವಶ

ಬಾಲಸಂರಕ್ಷಣಾ ಕೇಂದ್ರದಿಂದ ದನ ಕದ್ದ ಇಬ್ಬರು ಕಳ್ಳರ ಬಂಧನ : ಕಾರು ವಶ
ಮಂಗಳೂರು, ಡಿಸೆಂಬರ್ 12 : ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ದನ ಕಳ್ಳತನ ಮಾಡಿದ ಆರೋಪಿಗಳನ್ನು ಹಾಗೂ ದನ ಕಳ್ಳತನಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಈ ಸಂಬಂಧ ಅರೋಪಿಗಳಾದ ಬೆಂಗರೆಯ ಅಹಮ್ಮದ್ ಕಬೀರ್ ಹಾಗೂ ಬಂಟ್ವಾಳದ ಸಾಹುಲ್ ಹಮೀದ್ ಅವರುಗಳನ್ನು ಪೋಲಿಸರು ಬಂಧಿಸಿದ್ದಾರೆ.

ಮಂಗಳೂರು ನಗರದ ಕೂಳೂರು ರಿಲೆಯನ್ಸ್ ಪೆಟ್ರೋಲ್ ಪಂಪ್ ಬಳಿ ಇವರನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರಿಂದ ದನ ಕಳ್ಳತನ ಮಾಡಲು ಉಪಯೋಗಿಸಿದ ಕೆಎ-19-ಎಂಜಿ- 4760 ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರು ಹಾಗೂ ನಗದು ಹಣ ರೂ. 6,300/- ನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 5,06,300/- ಆಗಿರುತ್ತದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 9 ರಂದು ಮಂಗಳೂರು ತಾಲೂಕು ಮುನ್ನೂರು ಗ್ರಾಮದ ಕುತ್ತಾರ್ ಪದವು ಎಂಬಲ್ಲಿರುವ ಬಾಲಸಂರಕ್ಷಣಾ ಕೇಂದ್ರದಲ್ಲಿ ಸಾಕುತ್ತಿದ್ದ ಸುಮಾರು 10,000/- ಮೌಲ್ಯದ ಒಂದು ದನವನ್ನು ಯಾರೋ ಕಳ್ಳರು ಕಳವು ಮಾಡಿದ್ದರು.
ಈ ಬಗ್ಗೆ ಬಾಲಸಂರಕ್ಷಣಾ ಕೇಂದ್ರ ಮೇಲ್ವಿಚಾರಕಿಯವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದನಕಳ್ಳತನ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಹಾಗೂ ದನ ಕಳ್ಳತನ ಮಾಡಿ ಸಾಗಾಟ ಮಾಡಿದ ಕಾರಿನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
ಆರೋಪಿಗಳ ಪೈಕಿ ಅಹಮ್ಮದ್ ಕಬೀರ್ ಎಂಬಾತನ ವಿರುದ್ಧ ಈ ಹಿಂದೆ ಪಣಂಬೂರು, ಬಜಪೆ, ಕಾರ್ಕಳ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಟ್ಟು 7 ದನ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ.
ಇನ್ನೋರ್ವ ಆರೋಪಿ ಶಾಹುಲ್ ಹಮೀದ್ ಎಂಬಾತನ ವಿರುದ್ಧ ಕಡಬ,ಉಪ್ಪಿನಂಗಡಿ,ಪಣಂಬೂರು, ಬಜಪೆ ಮತ್ತು ಕಾರ್ಕಳ ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನಕ್ಕೆ ಸಂಬಂಧಪಟ್ಟಂತೆ 8 ಪ್ರಕರಣಗಳು ದಾಖಲಾಗಿರುತ್ತದೆ.