Connect with us

    BELTHANGADI

    ತುಮಕೂರು ಕಾರು ಕೊಲೆ ಪ್ರಕರಣ : ಬೆಳ್ತಂಗಡಿಯ ಮೂವರು ಚಿನ್ನದ ಆಸೆಗೆ ಹೋಗಿ ಬಲಿಯಾದರೆ..!?

    ತುಮಕೂರು : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮೂವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು ಈ ಸಂಬಂಧ ಒಟ್ಟು ಆರು ಮಂದಿಯನ್ನು ತುಮಕೂರಿನ ಕೋರಾ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

    ಬೆಳ್ತಂಗಡಿ ತಾಲೂಕಿನ ಟಿ.ಬಿ.ಕ್ರಾಸ್ ನಿವಾಸಿ, ಆಟೋ ಚಾಲಕ ಶಾಹುಲ್ ಹಮೀದ್, ಮದ್ದಡ್ಕ ನಿವಾಸಿ ಇಸಾಕ್ ಹಾಗೂ ಶಿರ್ಲಾಲು ಗ್ರಾಮದ ನಿವಾಸಿ ಸಿದ್ದೀಕ್ ಎಂಬವರನ್ನು ತಂಡವೊಂದು ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಹೇಳಿ ತುಮಕೂರಿಗೆ ಕರೆಸಿಕೊಂಡು ಹಣ ದೋಚಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಆರೋಪಿಗಳು ಬೆಳ್ತಂಗಡಿಗೆ ಬಂದು ವ್ಯವಹಾರ ಕುದುರಿಸಿದ್ದರು ಎಂಬ ಅನುಮಾನವೂ ಇದೀಗ ವ್ಯಕ್ತವಾಗುತ್ತಿದೆ. ತಮಗೆ ಜಮೀನಿನಲ್ಲಿ ಭಾರೀ ಪ್ರಮಾಣದ ಚಿನ್ನ ಸಿಕ್ಕಿದೆ, ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ ಈ ತಂಡ ವ್ಯವಹಾರ ಕುದುರಿಸಿದೆ ಎನ್ನಲಾಗಿದೆ. ಬೆಳ್ತಂಗಡಿಗೆ ಬಂದಿದ್ದ ದುಷ್ಕರ್ಮಿಗಳ ತಂಡ ಇಸಾಕ್ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದೆ. ತುಮಕೂರಿನ ಆ ತಂಡ ಇವರನ್ನು ನಂಬಿಸಿ ತುಮಕೂರಿಗೆ ಕರೆಸಿಕೊಂಡಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ತುಮಕೂರಿಗೆ ತೆರಳಿದ್ದ ಈ ಮೂವರನ್ನು ಹತ್ತು ದಿನಗಳಿಗೂ ಹೆಚ್ಚು ಕಾಲ ಅಲ್ಲಿಯೇ ಇರಿಸಿಕೊಂಡ ದುಷ್ಕರ್ಮಿಗಳು ಬಳಿಕ ವಂಚಿಸಿ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದೀಗ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

     

    ಡಿ.ಎನ್.ಎ. ಪರೀಕ್ಷೆಯ ಬಳಿಕ ಮೃತದೇಹ ಹಸ್ತಾಂತರ ಮೂರೂ ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಗುರುತು ಪತ್ತೆ ಅಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ಡಿ.ಎನ್.ಎ. ಪರೀಕ್ಷೆಯ ಬಳಿಕ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ. ಮೂರು ಕುಟುಂಬಗಳ ಸದಸ್ಯರು, ಸಂಬಂಧಿಕರು ತುಮಕೂರಿಗೆ ತೆರಳಿದ್ದಾರೆ.
    ಕೊಲೆಯಾದ ಇಸಾಕ್‌ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರೆ, ಸಾಹುಲ್ ಅಮೀದ್ ಆಟೋ ಚಾಲಕನಾಗಿ ಹಾಗೂ ಇಮ್ಮಿಯಾಜ್ ಸಿದ್ದಿಕ್ ಫುಟ್ ವೇರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ಇಸಾಕ್‌ಗೆ ಪರಿಚಿತರೊಬ್ಬರಿಂದ ಫೋನ್‌ ಕರೆಯೊಂದು ಬಂದಿತ್ತು. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ. ಕಡಿಮೆ ಬೆಲೆಗೆ ಎಲ್ಲ ಚಿನ್ನವನ್ನು ಕೊಡುತ್ತೇವೆ ಎಂದಿದ್ದರು ಹಂತಕರು. ಚಿನ್ನದಾಸೆ ತೋರಿಸಿ ಹಣವನ್ನು ದೋಚುವ ಪ್ಲ್ಯಾನ್‌ ಮಾಡಿಕೊಂಡಿದ್ದರು. ಕೊಲೆಯಾದ ಇಸಾಕ್ , ಸಾಹುಲ್ , ಇಮ್ಮಿಯಾಜ್ ಇದರ ಯಾವ ಅರಿವು ಇರದ ಇಸಾಕ್‌ ಸ್ನೇಹಿತನ ಕಾರು ಪಡೆದುಕೊಂಡು ಅಮೀದ್ ಹಾಗೂ ಇಮ್ಮಿಯಾಜ್ ಸಿದ್ದಿಕ್‌ಗೆ ಒಂದು ಡೀಲ್ ಇದೆ ಬನ್ನಿ ಎಂದು ಹಣದ ಚೀಲದೊಂದಿಗೆ ತುಮಕೂರಿಗೆ ಹೋಗಿದ್ದಎನ್ನಲಾಗಿದೆ . ತುಮಕೂರು ಮೂಲದ ಸ್ವಾಮಿ ಎಂಬಾತನ ಪರಿಚಯದ ಮೂಲಕ ಇಸಾಕ್‌ ತುಮಕೂರಿಗೆ ಬಂದಿದ್ದ. ಗುರುವಾರ ಸಂಜೆವರೆಗೂ ಕುಟುಂಬಸ್ಥರ ಜತೆ ಸಂಪರ್ಕದಲ್ಲಿದ್ದ ಇಸಾಕ್, ಗುರುವಾರ ರಾತ್ರಿ ನಂತರ ಮೊಬೈಲ್ ಸ್ವಿಚ್‌ ಆಫ್ ಆಗಿತ್ತು. ಹಂತಕರು ನಕಲಿ ಚಿನ್ನ ತೋರಿಸಿ, ಹಣ ದೋಚಲು ಮುಂದಾಗಿದ್ದರು. ಜನನಿಬಿಡ ಪ್ರದೇಶಕ್ಕೆ ಕರೆದೊಯ್ದು ಮೂವರನ್ನು ಹೊಡೆದು ಕೈ ಕಾಲು ಕಟ್ಟಿ ಹಾಕಿ ಕೊಲೆ ಮಾಡಿದ್ದರು. ನಂತರ ಕಾರಿನ ಡಿಕ್ಕಿಯೊಳಗೆ ಇಬ್ಬರ ಮೃತದೇಹ ಹಾಗೂ ಕಾರಿನ ಮಧ್ಯಭಾಗದ ಸೀಟಿನಲ್ಲಿ ಒಬ್ಬನ ಮೃತದೇಹ ಇಟ್ಟು ಬೆಂಕಿ ಹಚ್ಚಿದ್ದರು. ಗುರುತು ಪತ್ತೆ ಹಚ್ಚಲು ಆಗದ ಸ್ಥಿತಿಯಲ್ಲಿ ಕಾರು ಸಮೇತ ಸುಟ್ಟು ಹಾಕಿದ್ದರು. ಘಟನಾ ಸ್ಥಳದಲ್ಲಿದ್ದ ಕಾರಿನ ನಂಬರ್ ಆಧರಿಸಿ ಕಾರಿನ ಮಾಲೀಕ್‌ನನ್ನು ಸಂಪರ್ಕ ಮಾಡಿದಾಗ, 15 ದಿನಗಳ ಹಿಂದೆ ಕಾರು ಕೊಟ್ಟಿದ್ದಾಗಿ ಕಾರು ಮಾಲೀಕ ರಫಿಕ್ ತಿಳಿಸಿದ್ದ ಸದ್ಯ ಪ್ರಕರಣ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಸ್ವಾಮಿ ಸೇರಿ 6 ಜನರನ್ನು ವಶಕ್ಕೆ ಪಡೆದಿದ್ದಾರೆ. ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೀವ್ರಗತಿಯಲ್ಲಿ ತನಿಖೆ ಮುಂದುವರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply