Connect with us

DAKSHINA KANNADA

“ಯಾನ್ ಸೂಪರ್ ಸ್ಟಾರ್” ತುಳು ಸಿನಿಮಾ ಸೆ.22ರಂದು ಕರಾವಳಿಯಾದ್ಯಂತ ತೆರೆಗೆ

ಮಂಗಳೂರು, ಸೆಪ್ಟೆಂಬರ್ 20: “ಆನಂದ ಫಿಲಂಸ್ ಮತ್ತು ದಿ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ “ಯಾನ್ ಸೂಪರ್ ಸ್ಟಾರ್” ತುಳು ಚಿತ್ರವು ಸೆಪ್ಟಂಬರ್ 22 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ” ಎಂದು ರಾಮ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಳಿಕ ಮಾತಾಡಿದ ಸಿಐಡಿ ದಯಾ ಖ್ಯಾತಿಯ ದಯಾನಂದ ಶೆಟ್ಟಿ ಅವರು, “ಹಿಂದಿ ಸಿನಿಮಾ ಮತ್ತು ಧಾರವಾಹಿ ಕ್ಷೇತ್ರದಲ್ಲಿ ನಾನು ಕಳೆದ 25 ವರ್ಷಗಳಿಂದ ದುಡಿಯುತ್ತಿದ್ದೇನೆ. ನಾನೆಲ್ಲಿ ಹೋದರೂ ತುಳು ಸಿನಿಮಾ ಯಾವಾಗ ಮಾಡುತ್ತೀರಿ ಎಂದು ಪ್ರಶ್ನಿಸುತ್ತಿದ್ದರು. ಈಗ ನಾನು ನಟಿಸಿರುವ ಯಾನ್ ಸೂಪರ್ ಸ್ಟಾರ್ ತುಳು ಸಿನಿಮಾ ಬಿಡುಗಡೆಗೆ ತಯಾರಾಗಿದ್ದು ಶುಕ್ರವಾರ ಬಿಡುಗಡೆಯಾಗಲಿದೆ. ಮೇಕಿಂಗ್, ನಿರ್ದೇಶನ ಎಲ್ಲದರಲ್ಲೂ ಗ್ರ್ಯಾಂಡ್ ಆಗಿರುವ ಸಿನಿಮಾವನ್ನು ಖಂಡಿತಾ ತುಳುವರು ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ” ಎಂದರು.

ಬಳಿಕ ಮಾತಾಡಿದ ನಟ ಹರೀಶ್ ವಾಸು ಶೆಟ್ಟಿ ಅವರು, “ಯಾನ್ ಸೂಪರ್ ಸ್ಟಾರ್ ಸಿನಿಮಾ ಮಂಗಳೂರಿನ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಾಣಲಿದೆ.

ಸೆನ್ಸಾರ್ ನಲ್ಲಿ ಯು ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ ಪಡೆದಿದೆ.
ತುಳು ಸಿನಿಮಾರಂಗಕ್ಕೆ ಯಾನ್ ಸೂಪರ್ ಸ್ಟಾರ್ ಮೂಲಕ ಒಂದು ಸದಭಿರುಚಿಯ ಚಿತ್ರ ಲಭಿಸಲಿದೆ. ಕುಟುಂಬ ಸಮೇತ ಸಿನಿಮಾ ವೀಕ್ಷಿಸಬಹುದಾಗಿದೆ” ಎಂದರು.

ಬಳಿಕ ಮಾತಾಡಿದ ಕುಸೇಲ್ದರಸೆ ನವೀನ್ ಡಿ. ಪಡೀಲ್ ಅವರು, “ಒಂದೊಳ್ಳೆಯ ಕಥೆ, ನಿರ್ದೇಶನ ಇರುವ ಯಾನ್ ಸೂಪರ್ ಸ್ಟಾರ್ ಸಿನಿಮಾ ಸೆ.22ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಈಗಾಗಲೇ ಮುಂಬಯಿ, ಪೂನಾ ಮತ್ತಿತರ ಕಡೆಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದ್ದು, ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ. ಬೆಂಗಳೂರು ಮತ್ತು ಗಲ್ಫ್ ದೇಶಗಳಲ್ಲೂ ಸಿನಿಮಾ ಬಿಡುಗಡೆಗೆ ತಯಾರಿ ನಡೆಯುತ್ತಿದೆ” ಎಂದರು.

ಚಿತ್ರಕ್ಕೆ ಉಡುಪಿ ಸುತ್ತಮುತ್ತ ಒಂದೇ ಹಂತದಲ್ಲಿ 25 ದಿನಗಳ ಕಾಲ ಯಾನ್ ಸೂಪರ್ ಸ್ಟಾರ್ ಸಿನಿಮಾಕ್ಕೆ ಚಿತ್ರೀಕರಣ ನಡೆದಿತ್ತು. ಮುಖ್ಯವಾಗಿ ಇಲ್ಲಿ ಜನಮನ್ನಣೆ ಪಡೆದಿರುವ ಸಿಐಡಿ ಧಾರಾವಾಹಿಯ ಮುಂಬಯಿ ಕಲಾವಿದರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದಯಾನಂದ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಸಾಯಿ ಬಲ್ಲಾಲ್ ರೊಂದಿಗೆ ತುಳುನಾಡಿನ ಖ್ಯಾತ ಕಲಾವಿದರಾದ ಕುಸೇಲ್ದರಸೆ ನವೀನ್ ಡಿ ಪಡೀಲ್, ನವರಾಸ ರಾಜೆ ಭೋಜರಾಜ ವಾಮಂಜೂರು, ಮಾನಸಿ ಸುಧೀರ್, ಅನ್ ಷಾ, ಅಶೋಕ್ ಪಕ್ಕಳ, ಮಾಸ್ಟರ್ ಅತಿಶ್ ಶೆಟ್ಟಿ, ಮಾಸ್ಟರ್ ಅರುಷ್ ಯು ಪೂಜಾರಿ, ಕುಮಾರಿ ಶ್ರೀಯಾ ಹೆಗ್ಡೆ ಮೊದಲಾದವರು ತಾರಾಗಣದಲ್ಲಿದ್ದಾರೆ.

ಸಂತೋಷ್ ಶೆಟ್ಟಿಯವರ ಕತೆಗೆ ಸಚಿನ್ ಶೆಟ್ಟಿ ಕುಂಬಳೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆ : ಅಂಕಣ ಜೋಷಿ, ಸಂತೋಷ್ ಶೆಟ್ಟಿ, ಸಾಹಿತ್ಯ ಹಾಡು, ಸಂಗೀತ: ವಿ ಮನೋಹರ್, ಗುರುಕಿರಣ್ ಈ ಸಿನಿಮಾಕ್ಕೆ ಹಾಡು ಹಾಡಿದ್ದಾರೆ. ಹಿನ್ನಲೆ ಸಂಗೀತ: ಸಂಜಯ್ ವಾಂದ್ರೇಕರ್, ಕ್ಯಾಮರಾ :ಕೃಷ್ಣರಾಜ್ ಕೋಟ್ಯಾನ್, ಸಾಹಸ: ಆನಂದ ಶೆಟ್ಟಿ, ಸಹ ನಿರ್ದೇಶನ ರಾಮ್ ದಾಸ್ ಸಸಿಹಿತ್ಲು, ಪ್ರೈಡ್ ಸುಬ್ರಹ್ಮಣ್ಯ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಸತೀಶ್ ದುಬೆ, ಕ್ರಿಯೇಟಿವ್ ಡೈರಕ್ಟರ್ : ಕ್ರಿಸ್ತಬೆಲ್ಲೆ ಡಿ ಸೋಜ, ಪ್ರೊಡಕ್ಷನ್ ಹೆಡ್ಡ್ : ಚಂದ್ರಕಾಂತ್ ಭಂಡಾರಿ, ನಿರ್ದೇಶನ : ಸಂತೋಷ್ ಶೆಟ್ಟಿ

ಸಂಪೂರ್ಣ ಮನರಂಜನೆಯ ಸಿನಿಮಾ!

ಯಾನ್ ಸೂಪರ್ ಸ್ಟಾರ್ ಹೆಸರು ಸೂಚಿಸಿರುವಂತೆ ಇದು ತುಳುವಿನಲ್ಲಿ ಹೊಸ ಬಗೆಯ ಸಿನಿಮಾ. ಪ್ರೇಕ್ಷಕರ ನಾಡಿ ಮಿಡಿತವನ್ನು ಅರಿತು ನಿರ್ದೇಶಕರು ಇಲ್ಲಿ ಸಿನಿಮಾದ ಕತೆಯನ್ನು ಹೆಣೆದಿದ್ದಾರೆ. ಸಿನಿಮಾದಲ್ಲಿ ಹಾಸ್ಯವೂ ಇದೆ, ಸಂದೇಶವೂ ಇದೆ. ಪ್ರೇಕ್ಷಕರಿಗೆ ಸಿನಿಮಾದ ಕುರಿತು ಅತೀವ ಕುತೂಹಲ ಇದೆ. ಆನಂದ್ ಫಿಲಂಸ್ ನಲ್ಲಿ ತೆರೆಕಂಡಿರುವ ಸಿನಿಮಾಗಳು ಯಶಸ್ವೀ ಪ್ರದರ್ಶನಗಳನ್ನು ಕಂಡಿರುವುದರಿಂದ ಪ್ರೇಕ್ಷಕರು ಯಾನ್ ಸೂಪರ್ ಸ್ಟಾರ್ ಸಿನಿಮಾದ ಕುರಿತು ಕೂಡಾ ಬಹಳಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದಯಾನಂದ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ನವೀನ್ ಡಿ. ಪಡೀಲ್, ನಿರ್ದೇಶಕ ಸಂತೋಷ್ ಶೆಟ್ಟಿ, ರಾಮ್ ಶೆಟ್ಟಿ, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *