LATEST NEWS
ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕ ಮಂಡನೆ : ಒವೈಸಿ ವಿರೋಧ

ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕ ಮಂಡನೆ : ಒವೈಸಿ ವಿರೋಧ
ನವದೆಹಲಿ, ಡಿಸೆಂಬರ್ 28 : ದೇಶಾದ್ಯಂತ ಭಾರಿ ಕೋಲಾಹಲ ನಡೆಸಿದ್ದ ತ್ರಿವಳಿ ತಲಾಖ್ ವಿಧೇಯಕ ಲೋಕಸಭೆಯಲ್ಲಿ ಮಂಡನೆಯಾಗಿದೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ತ್ರಿವಳಿ ತಲಾಖ್ ವಿಧೇಯಕವನ್ನು ಮಂಡಿಸಿದರು.

ಈ ವೇಳೆ ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರ ಸಮಾನ ಹಕ್ಕು ಮತ್ತು ನ್ಯಾಯಕ್ಕಾಗಿ ಈ ಕಾನೂನು ಹೊರತು, ಅಲ್ಪ ಸಂಖ್ಯಾತ ಪ್ರಾರ್ಥನೆ, ಸಂಪ್ರದಾಯ ಮತ್ತು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ವಿಧೇಯಕ ಮಂಡನೆಯಾಗುತ್ತಿದ್ದಂತೆ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್, ಟಿಎಂಸಿ, ಆರ್ ಜೆಡಿ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.
ತ್ರಿವಳಿ ತಲಾಖ್ ವಿಧೇಯಕವನ್ನು ಎಲ್ಲರೂ ಒಮ್ಮತದಿಂದ ಅಂಗೀಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದರು.
ಆದರೆ ಲೋಕಸಭೆಯಲ್ಲಿ ಎಐಎಂಐಎಂ ವರಿಷ್ಠ, ಸಂಸದ ಅಸಾದುದ್ದೀನ್ ಒವೈಸಿ ತ್ರಿವಳಿ ತಲಾಖ್ ಗೆ ಪ್ರಬಲ ವಿರೋಧ ವ್ಯಕ್ತಪಡಿಸಿದರು.
ಈ ವಿಧೇಯಕದಿಂದ ಮುಸಲ್ಮಾನ ಮಹಿಳೆಯರ ಅಧಿಕಾರಕ್ಕೆ ಧಕ್ಕೆ ಬಂದಿದೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ತ್ರಿವಳಿ ತಲಾಕ್ ಮಸೂದೆ ಎಂದೇ ಕರೆಯಲ್ಪಡುವ ಮುಸ್ಲಿಂ ಮಹಿಳಾ ವೈವಾಹಿಕ ಹಕ್ಕುಗಳ ರಕ್ಷಣೆಯ ಮಸೂದೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿ ಸಿದ್ಧಪಡಿಸಿತ್ತು.
ಈ ಮಸೂದೆಯ ಪ್ರಕಾರ ಯಾವುದೇ ರೂಪದಲ್ಲಿ ನೀಡಲ್ಪಡುವ ತ್ರಿವಳಿ ತಲಾಕ್ ಅಥವಾ ತಲಾಕ್ ಎ ಬಿದ್ದತ್ ಅನ್ನು ಕಾನೂನು ಬಾಹಿರ ಮತ್ತು ಅಸಿಂಧುವೆಂದು ಪರಿಗಣಿಸುತ್ತದೆ ಮತ್ತು ತ್ರಿವಳಿ ತಲಾಕ್ ನೀಡುವ ಮುಸ್ಲಿಂ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನನ್ನೂ ವಿಧಿಸುತ್ತದೆ.
ಇಂದು ಮಂಡನೆಯಾಗಿರುವ ತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದ ಬಳಿಕ ರಾಜ್ಯಸಭೆಯಲ್ಲಿ ಮಂಡನೆಯಾಗಲಿದ್ದು, ಅಲ್ಲಿಯೂ ಅನುಮೋದನೆ ದೊರೆತ ಬಳಿಕ ರಾಷ್ಟ್ರಪತಿಗಳ ಅಂಕಿತಕ್ಕೆ ರವಾನೆ ಮಾಡಲಾಗುತ್ತದೆ.
ರಾಷ್ಟ್ರಪತಿಗಳ ಅಂಕಿತ ದೊರೆಯುತ್ತಿದ್ದಂತೆಯೇ ಮಸೂದೆ ಕಾನೂನಾಗಿ ಜಾರಿಯಾಗಲಿದೆ
ಭಾರತದಲ್ಲಿ ಉಚ್ಚಾರಣೆ, ಬರಹ, ಇ ಮೇಲ್, ಎಸ್ಎಂಎಸ್, ವಾಟ್ಸಾಪ್ ಮೂಲಕ ತ್ರಿವಳಿ ತಲಾಕ್ ನೀಡುವ ಕ್ರಮ ಮುಸ್ಲಿಮ್ ಪುರುಷರಲ್ಲಿ ಜಾರಿಯಲ್ಲಿದೆ.
ಈ ಬಗ್ಗೆ ದೇಶಾದ್ಯಂತ ಭಾರಿ ಚರ್ಚೆಗಳು ಪರ – ವಿರೋಧಗಳು, ಪ್ರತಿಭಟನೆಗಳು ನಡೆದಿದ್ದುವು.