LATEST NEWS
ರೈಲು ಸಂಚಾರ ಇದೆ ಎಂದು ನಂಬಿ ರಸ್ತೆಗೆ ಬಿದ್ದ ವಲಸೆ ಕಾರ್ಮಿಕರು….!!

ರೈಲು ಸಂಚಾರ ಇದೆ ಎಂದು ನಂಬಿ ರಸ್ತೆಗೆ ಬಿದ್ದ ವಲಸೆ ಕಾರ್ಮಿಕರು….!!
ಮಂಗಳೂರು ಮೇ.28: ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿರುವ ಶ್ರಮಿಕ್ ಎಕ್ಸ್ ಪ್ರೆಸ್ ನಂತರವೂ ವಲಸೆ ಕಾರ್ಮಿಕರ ಸ್ಥಿತಿ ಇನ್ನೂ ಸುಧಾರಿಸಿಲ್ಲ. ಪ್ರತಿ ಭಾರಿ ತಮ್ಮ ಊರಿಗೆ ರೈಲು ಹೊರಡಲಿದೆ ಎಂದು ನಂಬಿ ರೈಲ್ವೆ ನಿಲ್ದಾಣಕ್ಕೆ ಗಂಟು ಮೂಟೆ ಕಟ್ಟಿ ಆಗಮಿಸಿ..ಮತ್ತೆ ವಾಪಾಸ್ ಹೋಗುವುದು ಮಾಮೂಲಿಯಾಗಿ ಬಿಟ್ಟಿದೆ.
ಈಗ ಮತ್ತೆ ಪಶ್ಚಿಮ ಬಂಗಾಳಕ್ಕೆ ತೆರಳಲು ರೈಲು ಹೊರಡಲಿದೆ ಎಂಬ ವದಂತಿ ನಂಬಿದ ಕಾರ್ಮಿಕರು ಬಾಡಿಗೆ ಕೊಠಡಿಗಳನ್ನು ಬಿಟ್ಟು ಬಂದು ರಸ್ತೆಗೆ ಬಿದ್ದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ಹೊರವಲಯದ ಜೋಕಟ್ಟೆ ಭಾಗದಲ್ಲಿ ಬಹಳಷ್ಟು ಮಂದಿ ಪಶ್ಚಿಮ ಬಂಗಾಳ, ಬಿಹಾರ ಮೂಲದ ಕಾರ್ಮಿಕರು ನೆಲೆ ಕಂಡಿದ್ದಾರೆ. ಸೇವಾಸಿಂಧು ಏಪ್ ಮೂಲಕ ತಮ್ಮೂರಿಗೆ ತೆರಳಲು ನೋಂದಾಯಿಸಿದ್ದ ಕಾರ್ಮಿಕರಿಗೆ ರೈಲು ಇಂದು ಮಧ್ಯಾಹ್ನ ಹೊರಡಲಿದೆ ಎಂಬ ಸಂದೇಶ ಬಂದಿತ್ತು.
ಹೀಗಾಗಿ ನೂರಾರು ಕಾರ್ಮಿಕರು ಮೂರು ತಿಂಗಳ ಬವಣೆಯ ಬಳಿಕ ಊರಿಗೆ ತೆರಳಲು ರೆಡಿಯಾಗಿದ್ದರು. ತಾತ್ಕಾಲಿಕ ಬಾಡಿಗೆ ಕೊಠಡಿಗಳನ್ನು ಬಿಟ್ಟು ತಮ್ಮ ಸಾಮಾನುಗಳನ್ನು ತುಂಬಿಕೊಂಡು ಹೊರಟಿದ್ದ ಮಂದಿಗೆ ಅರ್ಧ ದಾರಿಯಲ್ಲಿ ರೈಲು ಕ್ಯಾನ್ಸಲ್ ಆಗಿರುವ ಬಗ್ಗೆ ಸಂದೇಶ ಬಂದಿದ್ದು ಕನಸು ಹೊತ್ತು ಬಂದಿದ್ದವರಿಗೆ ನಿರಾಸೆಯಾಗಿದೆ.
ಜಿಲ್ಲಾಡಳಿತ ರೈಲು ನಿಲ್ದಾಣಕ್ಕೆ ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡುವ ಭರವಸೆಯಿಂದ ಕಾರ್ಮಿಕರು ಜೋಕಟ್ಟೆಯ ಇಂಡಸ್ಟ್ರಿಯಲ್ ಏರಿಯಾದ ರಸ್ತೆ ಮಧ್ಯೆ ಕುಳಿತಿದ್ದರು. ಕೊನೆಗೆ ಸುರತ್ಕಲ್ ಪೊಲೀಸರು ಮತ್ತು ಸ್ಥಳೀಯರು ಬಂದು ನೊಂದು ನಿಂತಿದ್ದ ಕಾರ್ಮಿಕರನ್ನು ಸಮಾಧಾನ ಪಡಿಸಿದರು. ಊಟ, ನೀರಿಲ್ಲದೆ ರಸ್ತೆಯಲ್ಲೇ ಬಿಸಿಲಲ್ಲಿ ನಿಂತ ಕಾರ್ಮಿಕರಿಗೆ ಡಿವೈಎಫ್ಐ ವತಿಯಿಂದ ಊಟದ ವ್ಯವಸ್ಥೆ ಮಾಡಲಾಯ್ತು..