LATEST NEWS
ಉಡುಪಿಯಲ್ಲಿ ಸ್ಟಾರ್ಟ್ ಅಪ್ ಕೇಂದ್ರ ಪ್ರಾರಂಭ- ಜಿಲ್ಲಾಧಿಕಾರಿ

ಉಡುಪಿಯಲ್ಲಿ ಸ್ಟಾರ್ಟ್ ಅಪ್ ಕೇಂದ್ರ ಪ್ರಾರಂಭ- ಜಿಲ್ಲಾಧಿಕಾರಿ
ಉಡುಪಿ ಡಿಸೆಂಬರ್ 11: ಜಿಲ್ಲೆಯಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಮಾಹಿತಿ ಹಾಗೂ ಅಗತ್ಯ ಮಾರ್ಗದರ್ಶನ, ನೆರವು ನೀಡುವಂತಹ ಸ್ಟಾರ್ಟ್ ಅಪ್ ಕೇಂದ್ರವನ್ನು ಕೈಗಾರಿಕಾ ಇಲಾಖೆ ಸಹಯೋಗದಲ್ಲಿ ಒಂದು ತಿಂಗಳ ಒಳಗೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಮಂಗಳವಾರ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ ಇವರ ಜಂಟಿ ಆಶ್ರಯದಲ್ಲಿ, ಕೈಗಾರಿಕಾ ಹಾಗೂ ಸೇವಾ ವಲಯಗಳ ಅಭಿವೃದ್ದಿಗಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅನೇಕ ಪ್ರತಿಭಾವಂತ, ಯುವ ಉತ್ಸಾಹಿ, ಕೌಶಲ್ಯ ಹೊಂದಿದ ಯುವಕರಿದ್ದು, ಅವರು ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ, ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸುವುದು ಸೇರಿದಂತೆ ಹಲವು ಅತ್ಯುತ್ತಮ ಯೋಜನೆಗಳೊಂದಿಗೆ ಉದ್ಯಮ ಪ್ರಾರಂಭಿಸುವ ಆಸಕ್ತಿ ಹೊಂದಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಹಣಕಾಸು ಸಂಸ್ಥೆಗಳಿಂದ ಕಡಿಮೆ ಬಡ್ಡಿ ದರದಲ್ಲಿ ಅಗತ್ಯ ಆರ್ಥಿಕ ನೆರವು ಪಡೆಯುವ, ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವ ಬಗ್ಗೆ ಮಾಹಿತಿ ಅಗತ್ಯ ಇಲ್ಲ, ಇಂತಹ ಯುವಕರಿಗೆ ನೆರವು ನೀಡುವ ಉದ್ದೇಶದಿಂದ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಮಣಿಪಾಲ ಕೈಗಾರಿಕಾ ಕೇಂದ್ರದಲ್ಲಿ ಸ್ಟಾರ್ಟ್ ಅಫ್ ಕೇಂದ್ರ ಒಂದು ತಿಂಗಳ ಒಳಗಾಗಿ ತೆರೆಯಲು ಯೋಜನೆ ರೂಪಿಸಲಾಗಿದೆ. ಈ ಕೇಂದ್ರದಲ್ಲಿ ಹೊದ ಉದ್ದಿಮೆ ಪ್ರಾರಂಬಿಸಲು ಎಲ್ಲಾ ಅಗತ್ಯ ಮಾರ್ಗದರ್ಶನ ಮತ್ತು ನೆರವು ಪಡೆಯುವ ಕುರಿತಂತೆ ಸಮಗ್ರ ಮಾಹಿತಿ ಒದಗಿಸಲಾಗುವುದು, ಯುವ ಉದ್ದಿಮೆದಾರರು ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿಯಲ್ಲಿ ಉದ್ಯೋಗಾಧಾರಿತ ತರಬೇತಿ ನೀಡುವ ಸಂಸ್ಥೆಗಳಿದ್ದು, ಅವುಗಳಲ್ಲಿ ಪಾರಂಪರಿಕವಾದ ಹಿಂದಿನ ತರಬೇತಿಗಳನ್ನೇ ಯುವ ಜನರು ಪಡೆಯುತ್ತಿದ್ದಾರೆ ಇಂತಹ ತರಬೇತಿಯಿಂದ ಈಗಾಗಲೇ ಹಲವು ಮಂದಿ ಉದ್ಯೋಗ ಪ್ರಾರಂಭಿಸಿದ್ದು, ಈ ಉದ್ದಿಮೆಗಳಲ್ಲಿ ಲಾಭದ ಪ್ರಮಾಣ ಕಡಿಮೆ ಇದೆ ಆದ್ದರಿಂದ ಯುವ ಜನತೆ ಹೊಸ ಯೋಜನೆಗಳೊಂದಿಗೆ ಉದ್ಯಮಗಳನ್ನು ಪ್ರಾರಂಭಿಸುವ ಕುರಿತು ತರಬೇತಿ ಪಡೆಯಬೇಕು, ಉಡುಪಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರವಾಸೋದ್ಯಮದಲ್ಲಿ ಹೋಂ ಸ್ಟೇ, ಟೂರಿಸ್ಟ್ ಗೈಡ್ ಮುಂತಾದ ಉದ್ಯೋಗಗಳಿಂದ ಹೆಚ್ಚಿನ ಆರ್ಥಿಕ ಸಂಪಾದನೆ ಸಾಧ್ಯ, ಜಿಲ್ಲೆಯಲ್ಲಿ ಎಸ್.ಎಲ್.ಆರ್.ಎಂ ಘಟಕಗಳನ್ನು ಗ್ರಾಮ ಪಂಚಾಯತ್ಗಳು ಮಾತ್ರ ಮಾಡುತ್ತಿವೆ, ಇದುವರೆಗೆ ಜಿಲ್ಲೆಯ 45 ಗ್ರಾಮ ಪಂಚಾಯತ್ಗಳು ಎಸ್.ಎಲ್.ಆರ್.ಎಂ ಘಟಕಗಳಿಂದ 11 ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸಿವೆ, ಖಾಸಗಿ ವ್ಯಕ್ತಿಗಳು ಮುಂದೆ ಬಂದರೆ ಅವರಿಗೂ ಸಹ ಘಟಕ ಪ್ರಾರಂಭಿಸಲು ಸೂಕ್ತ ತರಬೇತಿ ಮತ್ತು ಅನುಮತಿ ನೀಡಲಾಗುವುದು, ಒಣ ಕಸ ಸಂಗ್ರಹಣೆಯ ಸಮರ್ಪಕ ವಿಲೇವಾರಿಯಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.