LATEST NEWS
ಕರಾವಳಿಗೆ ಪ್ರತ್ಯೇಕ ಮರಳು ನೀತಿ ಬಗ್ಗೆ ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚೆ- ರಾಜಶೇಖರ ಪಾಟೀಲ್

ಕರಾವಳಿಗೆ ಪ್ರತ್ಯೇಕ ಮರಳು ನೀತಿ ಬಗ್ಗೆ ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚೆ- ರಾಜಶೇಖರ ಪಾಟೀಲ್
ಉಡುಪಿ, ಜನವರಿ 29 : ಕರಾವಳಿ ಜಿಲ್ಲೆಯಲ್ಲಿ ಮರಳುಗಾರಿಕೆ ಕುರಿತಂತೆ ಪ್ರತ್ಯೇಕ ನೀತಿ ರೂಪಿಸಲು ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ ತಿಳಿಸಿದ್ದಾರೆ. ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮರಳು ತೆಗೆಯುತ್ತಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ರೂಪಿಸಿದ ನಿಯಮಗಳು ಈ ಜಿಲ್ಲೆಗೆ ಅನ್ವಯಿಸುವುದಿಲ್ಲ, ಆದ್ದರಿಂದ ಈ ಜಿಲ್ಲೆಗಳ ಪ್ರಾದೇಶಿಕತೆಗೆ ಅನುಗುಣವಾಗಿ ಪ್ರತ್ಯೇಕ ಮರಳು ನೀತಿ ರೂಪಿಸುವಂತೆ ಹಾಗೂ ನಿಯಮಗಳನ್ನು ಸರಳೀಕರಣಗೊಳಿಸುವಂತೆ ಜಿಲ್ಲೆಯ ಎಲ್ಲಾ ಶಾಸಕರು ಸಚಿವರಲ್ಲಿ ಕೋರಿದರು, ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿ ಕುರಿತಂತೆ ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚಿಸಲಾಗುವುದು, ಪ್ರತ್ಯೇಕ ಮರಳು ನೀತಿಗೆ ಅನುಗುಣವಾಗಿ ಸೇರಿಸಬಹುದಾದ ಅಂಶಗಳ ಕುರಿತು ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ಗುರುತಿಸಲಾಗಿರುವ 23 ನಾನ್ ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವ ಕುರಿತಂತೆ ಪಿ.ಡಬ್ಯೂಡಿ, ಕೆ.ಆರ್.ಐ.ಡಿಎಲ್, ಪಿ.ಆರ್.ಇ.ಡಿ ಸೇರಿದಂತೆ ವಿವಿಧ ಸರಕಾರಿ ಏಜೆನ್ಸಿಗಳಿಗೆ ಹಾಗೂ ಪ್ರಾಯೋಗಿಕವಾಗಿ ಸದ್ರಿ ಮರಳು ದಿಬ್ಬ ವ್ಯಾಪ್ತಿಯ 2 ಗ್ರಾಮ ಪಂಚಾಯತ್ ಗಳಿಗೆ ಅನುಮತಿ ನೀಡುವ ಕುರಿತಂತೆ ಸಭೆಯಲ್ಲಿ ನಿರ್ಧರಿಸಲಾಯಿತು.