LATEST NEWS
” 5 ಶತಮಾನಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನೋಡುವುದು ನಮ್ಮ ಜೀವಿತಾವಧಿಯ ಭಾಗ್ಯ”

ಮಂಗಳೂರು : “500 ವರ್ಷಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿರುವುದು ನಮ್ಮೆಲ್ಲರ ಪಾಲಿನ ಜೀವಿತಾವಧಿಯ ಭಾಗ್ಯ” ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು.
ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಸಮೀಪದಿಂದ ಹಿರಿಯರು, ಮಹಿಳೆಯರು, ವಿಶ್ವಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಾರ್ಟಿ ಸೇರಿದಂತೆ ಪರಿವಾರದ ನೂರಾರು ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ಮೆರವಣಿಗೆಯಲ್ಲಿ ಮನೆಮನೆಗಳಿಗೆ ತಲುಪಿಸುವ ಕಾರ್ಯಗಳು ನೆರವೇರಿದ ಸಂದರ್ಭದಲ್ಲಿ ವಜ್ರೇಶ್ವರಿ ಅಪಾರ್ಟ್ಮೆಂಟ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿದರು.

ಜನವರಿ 22ನೇ ತಾರೀಕು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ಭಜನೆ, ರಾಮನಾಮ ಸ್ಮರಣೆ ಹಾಗೂ ಉತ್ತರ ದಿಕ್ಕಿಗೆ ಆರತಿಯನ್ನು ಬೆಳಗಿಸುವ ಮೂಲಕ, ಮಾನ್ಯ ಪ್ರಧಾನಿ ಮೋದಿಯವರ ಆಶಯದಂತೆ ದೀಪಾವಳಿ ಹಬ್ಬದ ವಾತಾವರಣವನ್ನು ಸೃಷ್ಟಿಸಿ ರಾಮ ಕಾರ್ಯದಲ್ಲಿ ಭಾಗವಹಿಸೋಣ ಎಂದು ಇದೇ ವೇಳೆಯಲ್ಲಿ ಮನವಿ ಮಾಡಿದರು.
5 ಶತಮಾನಗಳ ಕಾಲ ನಡೆದ ಹೋರಾಟದಲ್ಲಿ ಸಾಧು ಸಂತರು ಸೇರಿದಂತೆ ಲಕ್ಷಾಂತರ ಮಂದಿ ಭಾಗಿಯಾಗಿದ್ದು, ಸಾವಿರಾರು ಮಂದಿ ಪ್ರಾಣತ್ಯಾಗ ಮಾಡಿದ್ದು ಸದಾ ಸ್ಮರಣೀಯ. ಅದರಲ್ಲೂ ನಂತರದ ದಿನಗಳಲ್ಲಿ ವಿಶ್ವಹಿಂದೂ ಪರಿಷತ್ ಹೋರಾಟದ ನೇತೃತ್ವ ವಹಿಸಿಕೊಂಡು ಮುಂಚೂಣಿಯಲ್ಲಿದ್ದದ್ದು ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿಯನ್ನು ನೀಡಿತ್ತು ಎಂದರು.
ಈಗಾಗಲೇ ದೇಶಾದ್ಯಂತ ರಾಮ ನಾಮ ವ್ಯಾಪಿಸಿದ್ದು ಮಂತ್ರಾಕ್ಷತೆ ವಿತರಣೆ ಸಮಯದಲ್ಲಿ ಪ್ರತಿಯೊಂದು ಮನೆಗಳಲ್ಲಿಯೂ ರಾಮ ಭಕ್ತರಿಗೆ ಸಂಭ್ರಮದ ಸ್ವಾಗತ ಸಿಗುತ್ತಿದೆ. ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ರಾಮಭಕ್ತನ ಮನೆಗೂ ಈ ಭಕ್ತಿ ಅಭಿಯಾನ ತಲುಪಲಿದೆ, ಜೈ ಶ್ರೀರಾಮ್” ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹರ್ಷ ವ್ಯಕ್ತಪಡಿಸಿದರು