ನವದೆಹಲಿ: ಧಾರ್ಮಿಕ ಪಂಗಡಗಳ ಹೆಸರಿನಲ್ಲಿ ದೇವಾಲಯಗಳಿಂದ ಇತರರನ್ನು ಹೊರಗಿಡುವ ಪ್ರವೃತ್ತಿಯು ಹಿಂದೂ ಧರ್ಮಕ್ಕೆ ಮಾರಕವಾಗಲಿದೆ ಎಂದು ಸುಪ್ರೀಂ ಕೋರ್ಟ್ನ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠ ಗುರುವಾರ ತಿಳಿಸಿದೆ. ಶಬರಿಮಲೆ ಪ್ರಕರಣದ ಎರಡನೇ ದಿನದ ವಿಚಾರಣೆಯಲ್ಲಿ ಸಾಂವಿಧಾನಿಕ ನೈತಿಕತೆ ಮತ್ತು ಧಾರ್ಮಿಕ ಪಂಗಡಗಳ ಹಕ್ಕುಗಳ ಬಗ್ಗೆ ಪೀಠವು ಗಂಭೀರ ಚರ್ಚೆ ನಡೆಸಿತು.
ನಾಯರ್ ಸರ್ವಿಸ್ ಸೊಸೈಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್, “ಧಾರ್ಮಿಕ ಪಂಗಡವು ತನ್ನ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕಿನಲ್ಲಿ ರಾಜ್ಯವು ಹಸ್ತಕ್ಷೇಪ ಮಾಡುವಂತಿಲ್ಲ” ಎಂದು ವಾದಿಸಿದರು. ‘ನಾವು ಪ್ರತ್ಯೇಕ ಧಾರ್ಮಿಕ ಪಂಗಡವಾಗಿದ್ದು, ಬೆಟ್ಟದ ಮೇಲಿನ ದೇವಸ್ಥಾನವನ್ನು ನಿರ್ವಹಿಸುವ ಹಕ್ಕು ನಮಗೆ ಮಾತ್ರವಿದೆ. ಅಲ್ಲಿ ನಮ್ಮ ಹೊರತು ಇತರ ಸಂಪ್ರದಾಯದವರಿಗೆ ಪ್ರವೇಶವಿಲ್ಲ. ಸಂವಿಧಾನದ ಅನುಚ್ಛೇದ 26(ಬಿ) ಧಾರ್ಮಿಕ ಪಂಗಡಗಳಿಗೆ ತಮ್ಮ ಪ್ರತ್ಯೇಕ ಸಂಪ್ರದಾಯಗಳನ್ನು ಪಾಲಿಸುವ ಹಕ್ಕು ನೀಡುತ್ತದೆ. ಇದು ಅನುಚ್ಛೇದ 25(2)(ಬಿ)ಗಿಂತ ಹೆಚ್ಚು ಪ್ರಾಧಾನ್ಯ ಹೊಂದಿದೆ’ ಎಂದು ವಾದಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ನ್ಯಾ. ಬಿ.ವಿ. ನಾಗರತ್ನ, ‘ಒಂದು ಆತಂಕವಿದೆ. ಮುಲ್ಕಿ ವೆಂಕಟರಮಣ ದೇವರ ತೀರ್ಪಿನ ಸಂದರ್ಭದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರನ್ನು ಹೊರತುಪಡಿಸಿ ಇತರರು ಪ್ರವೇಶಿಸಬಾರದು ಎಂದು ಹೇಳಲಾಗಿದೆ. ಆದರೆ ಅದು ಹಿಂದೂ ಧರ್ಮಕ್ಕೆ ಋಣಾತ್ಮಕ ಪರಿಣಾಮ ಬೀರುತ್ತದೆ. ಎಲ್ಲರಿಗೂ ಪ್ರತಿಯೊಂದು ದೇವಸ್ಥಾನ ಮತ್ತು ಮಠಕ್ಕೂ ಪ್ರವೇಶವಿರಬೇಕು. ಶಬರಿಮಲೆ ತೀರ್ಪಿನ ವಿವಾದವನ್ನು ಬದಿಗಿಡಿ. ಆದರೆ ನೀವು ‘ಅದು ಒಂದು ಪದ್ಧತಿ ಮತ್ತು ಧರ್ಮದ ವಿಷಯ’ ಎಂದು ಹೇಳಿದರೆ, ನಾನು ನನ್ನ ಪಂಗಡ ಮಾತ್ರ ದೇವಸ್ಥಾನಕ್ಕೆ ಹೋಗಬೇಕು, ಇತರರು ಹೋಗಬಾರದು ಎನ್ನುತ್ತೇನೆ. ಇಂಥದ್ದು ಹಿಂದೂ ಧರ್ಮಕ್ಕೆ ಒಳ್ಳೆಯದಲ್ಲ. ಇದು ಧರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲು ಬಿಡಬಾರದು’ ಎಂದು ಅಭಿಪ್ರಾಯಪಟ್ಟರು.
Full Details On – https://www.livelaw.in/top-stories/sampradayas-attached-to-temple-must-be-followed-while-visiting-it-supreme-court-in-sabarimala-reference-hearing-529681
ನಂತರ ವೈದ್ಯನಾಥನ್ ಅವರು, ‘ಕೇರಳದಲ್ಲಿ ಕೆಲವು ಖಾಸಗಿ ಕುಟುಂಬಗಳ ದೇವಾಲಯಗಳಿವೆ. ಅಲ್ಲಿ ಕೇವಲ ಆ ಕುಟುಂಬದ ಸದಸ್ಯರು ಮಾತ್ರ ಹೋಗುತ್ತಾರೆ. ಅವರು ರಾಜ್ಯ ಅಥವಾ ಸಾರ್ವಜನಿಕರಿಂದ ನಿಧಿ ಪಡೆಯುವುದಿಲ್ಲ. ಅದನ್ನೂ ಎಲ್ಲರಿಗೂ ಮುಕ್ತಗೊಳಿಸಬೇಕೆಂಬುದು ಸರಿಯೇ?’ ಎಂಬ ವಾದ ಮುಂದಿಟ್ಟರು. ಆದರೆ ಇದನ್ನು ಬಲವಾಗಿ ತಳ್ಳಿಹಾಕಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್, “ನಿರ್ದಿಷ್ಟ ವರ್ಗದವರು ಮಾತ್ರ ದೇವಸ್ಥಾನಕ್ಕೆ ಬರಬೇಕು ಎಂಬ ವಾದವು ಧರ್ಮಕ್ಕೆ ಒಳ್ಳೆಯದಲ್ಲ” ಎಂದು ಅಭಿಪ್ರಾಯಪಟ್ಟರು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಪಂಗಡದ ಹಕ್ಕುಗಳು ಸಾಂವಿಧಾನಿಕ ನೈತಿಕತೆಗೆ ಒಳಪಟ್ಟಿವೆ ಎಂದು ನೆನಪಿಸಿದರು. ಅಸ್ಪೃಶ್ಯತೆ ನಿವಾರಣೆಯ ‘ವಿಧಿ 17’ ಎಂಬುದು ನೈತಿಕತೆಯ ತತ್ವವಾಗಿದೆ ಎಂದು ಅವರು ಪ್ರತಿಪಾದಿಸಿದರು. ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಎಎಸ್ಜಿ ಕೆ.ಎಂ. ನಟರಾಜ್, ಸಂವಿಧಾನದಲ್ಲಿನ “ಧಾರ್ಮಿಕ ಪಂಗಡ” ಪದವನ್ನು ಭಾರತೀಯ ಸಂದರ್ಭದಲ್ಲಿ “ಸಂಪ್ರದಾಯ” ಎಂದು ಅರ್ಥೈಸಿಕೊಳ್ಳಬೇಕು ಎಂದು ವಾದಿಸಿದರು. ವಿಚಾರಣೆಯು ಏಪ್ರಿಲ್ 10ರಂದು ಮುಂದುವರಿಯಲಿದೆ.