UDUPI
ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳಿಗೆ ಇಡೀ ದೇಶದಲ್ಲಿಯೇ ಅತೀ ಕನಿಷ್ಠ ವೇತನ – ಎಂ ವೆಂಕಟೇಶ್

ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳಿಗೆ ಇಡೀ ದೇಶದಲ್ಲಿಯೇ ಅತೀ ಕನಿಷ್ಠ ವೇತನ – ಎಂ ವೆಂಕಟೇಶ್
ಉಡುಪಿ ಜನವರಿ 29 : ರಾಜ್ಯದ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳನ್ನು ಖಾಯಂ ಗೊಳಿಸುವ ಕುರಿತಂತೆ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದಿಂದ ಪ್ರಯತ್ನಿಸಲಾಗುತ್ತಿದ್ದು, ಈ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ ವೆಂಕಟೇಶ್ ಹೇಳಿದ್ದಾರೆ.
ಅವರು ಸೋಮವಾರ , ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಫಾಯಿ ಕರ್ಮಚಾರಿಗಳ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸಫಾಯಿ ಕರ್ಮಚಾರಿ ಆಯೋಗದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳನ್ನು ಸಂದರ್ಶಿಸಿ, ಅವರ ಕುಂದು ಕೊರತೆ ಹಾಗೂ ಬೇಡಿಕೆಗಳ ಕುರಿತು ಆಯೋಗ ವತಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ಮಟ್ಟದಲ್ಲಿಯೇ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ, ಕಾನೂನು ಬದ್ದವಾಗಿ ಪೌರಕಾರ್ಮಿಕರಿಗೆ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಆಯೋಗ ಕೆಲಸ ಮಾಡುತ್ತಿದೆ ಎಂದು ವೆಂಕಟೇಶ್ ಹೇಳಿದರು.

ರಾಜ್ಯದಲ್ಲಿನ ಸಫಾಯಿ ಕರ್ಮಚಾರಿಗಳಿಗೆ ಇಡೀ ದೇಶದಲ್ಲಿಯೇ ಅತೀ ಹೆಚ್ಚು ಕನಿಷ್ಠ ವೇತನ ನೀಡಲಾಗುತ್ತಿದ್ದು, ಖಾಯಂ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ ಮೂಲಕ ನಿವೇಶನ ಇದ್ದರೆ ಮನೆ ನಿರ್ಮಾಣಕ್ಕೆ 7.5 ಲಕ್ಷ, ಹೊರಗುತ್ತಿಗೆ ನೌಕರರಿಗೆ 5.5 ಲಕ್ಷ ನೀಡಲಾಗುತ್ತಿದೆ, ಸಫಾಯಿ ಕರ್ಮಚಾರಿಗಳಿಗೆ ಬೆಳಗಿನ ಉಪಹಾರ ಯೋಜನೆ, 3 ತಿಂಗಳಿಗೊಮ್ಮೆ ಸಮಗ್ರ ಆರೋಗ್ಯ ತಪಾಸಣೆ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಸ್ಥಳೀಯ ಸಂಸ್ಥೆಗಳಲ್ಲಿನ ಶೇ.24.10 ರಲ್ಲಿ ಶೇ.20 ರಷ್ಟು ಮೊತ್ತವನ್ನು ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕೆ ಮೀಸಲಿಡಲಾಗಿದೆ.
ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ದಿಗಾಗಿ, ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ ಪ್ರಾರಂಭಿಸಿದ್ದು, ಆ ಮೂಲಕ ಮನೆ ನಿರ್ಮಾಣ, ವಾಹನ ಖರೀದಿಗೆ ಸಬ್ಸಿಡಿ ಸಹಿತ ಸಾಲ ವಿತರಣೆ, ಸ್ವ ಉದ್ಯೋಗ ತರಬೇತಿ ಪಡೆÀಯಲು ಕೌಶಲಾಭಿವೃಧ್ದಿ ತರಬೇತಿ ನೀಡಲಾಗುತ್ತಿದೆ, ಸಫಾಯಿ ಕರ್ಮಚಾರಿಗಳ ಮಕ್ಕಳು ಎಲ್.ಕೆ.ಜಿ ಯಿಂದ 5 ನೇ ತರಗತಿವರೆಗೆ ಶಿಕ್ಷಣ ಪಡೆಯಲು ಶಾಲಾ ವೆಚ್ಚ ಮರು ಪಾವತಿಸಲಾಗುತ್ತಿದ್ದು, 6 ನೇ ತರಗತಿಯಿಂದ ಪಿಯುಸಿ ವರೆಗೆ ಕಿತ್ತೂರು ಚೆನ್ನಮ್ಮ, ಮೊರಾರ್ಜಿ ದೇಸಾಯಿ ಮುಂತಾದ ಪ್ರತಿಷ್ಠಿತ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ಶೇ.5 ರಷ್ಟು ಸೀಟ್ಗಳನ್ನು ಮೀಸಲಿಡಲಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಸಫಾಯಿ ಕರ್ಮಚಾರಿಗಳಾಗಿ ಕೆಲಸಕ್ಕೆ ಸೇರುವ ಶೇ.20 ರಷ್ಟು ಮಂದಿ ಮಾತ್ರ ನಿವೃತರಾಗುತ್ತಿದ್ದು, ಉಳಿದ ಶೇ.80 ಮಂದಿ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದುತ್ತಿದ್ದಾರೆ ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಚಿಕಿತ್ಸೆಗಾಗಿ 10 ಕೋಟಿ ರೂ ಬಿಡುಗಡೆ ಮಾಡಲಾಗಿದೆ, ಕೆಲಸ ನಿರ್ವಹಿಸಲು 21 ಸಲಕರಣೆಗಳುಳ್ಳ ಸೂಕ್ತ ಸುರಕ್ಷಾ ಕಿಟ್ ಗಳನ್ನು ನೀಡಲಾಗುತ್ತಿದೆ, ಅಧಿಕಾರಿಗಳು ಈ ಸೌಲಭ್ಯಗಳ ಕುರಿತು ಸಫಾಯಿ ಕರ್ಮಚಾರಿಗಳಿಗೆ ಮಾಹಿತಿ ನೀಡುವುದರ ಜೊತೆಗೆ ಸೌಲಭ್ಯಗಳನ್ನು ಒದಗಿಸುವಂತೆ ವೆಂಕಟೇಶ್ ಸೂಚಿಸಿದರು.