LATEST NEWS
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ – ದಕ್ಷಿಣಕನ್ನಡ ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ

ಮಂಗಳೂರು ಜುಲೈ 10: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಅನಾಮಧೇಯ ಪತ್ರದ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಲು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ನಿರಾಕರಿಸಿದೆ. ಈ ಕುರಿತಂತೆ ಪೊಲೀಸ್ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಉಹಾಪೋಹಗಳಿಗೆ ಪೊಲೀಸರು ಸ್ಪಷ್ಟನೇ ನೀಡಬೇಕೆಂದು ನಿರೀಕ್ಷಿಸಬಾರದಾಗಿ ವಿನಂತಿಸಿದೆ.
ಪೊಲೀಸ್ ಇಲಾಖೆ ನೀಡಿದ ಪತ್ರಿಕಾ ಪ್ರಕಟಣೆ

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ 211 ರಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲವಾರು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವರದಿಗಳು ಹರಿದಾಡುತ್ತಿವೆ. ಈ ಕುರಿತು ಸ್ಪಷ್ಟಪಡಿಸುವುದು ಏನೆಂದರೆ, ಸದ್ರಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರೊಂದಿಗೆ ಹಾಗು ಮಧ್ಯಮಗಳೊಂದಿಗೆ ಹಂಚಿಕೊಳ್ಳುವಂತಹ ಖಚಿತ ಮಾಹಿತಿಗಳಿದ್ದಲ್ಲಿ, ಅದನ್ನು ಅಧಿಕೃತವಾಗಿ ಪತ್ರಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು. “ಮಿಡಿಯಾ ಟ್ರಯಲ್”ಗೆ ಸಂಬಂಧಿಸಿದಂತೆ, ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಈಗಾಗಲೇ ನೀಡಿರುವ ಮಾರ್ಗಸೂಚಿಗಳನ್ನು ಮಾಧ್ಯಮಗಳು ಪಾಲಿಸಲು ವಿನಂತಿಸಲಾಗಿದೆ.
ಪೊಲೀಸರು ಯಾವ ರೀತಿ ತನಿಖೆ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಹಾಗೂ ಪ್ರಕರಣದ ಬಗ್ಗೆ ಹರಿದಾಡುವ ಊಹಾಪೋಹಗಳಿಗೆ ಪೊಲೀಸರು ಸ್ಪಷ್ಟನೆ ನೀಡಬೇಕೆಂದು ನಿರೀಕ್ಷಿಸಬಾರದಾಗಿ ವಿನಂತಿ. ಹಾಗೆಯೇ ದೂರುದಾರರು ಅಥವಾ ಅವರ ಪರವಾಗಿ ಯಾರಾದರೂ ಪೊಲೀಸರ ಬಳಿ ಲಭ್ಯವಿರದ ಮಾಹಿತಿಗಳನ್ನು ನೇರವಾಗಿ ಮಾಧ್ಯಮಕ್ಕೆ ಹಂಚಿಕೊಂಡಿದ್ದಲ್ಲಿ, ಈ ಬಗ್ಗೆಯೂ ಪೊಲೀಸ್ ಇಲಾಖೆಯಿಂದ ಪ್ರತಿಕ್ರಿಯೆ ನಿರೀಕ್ಷಿಸತಕ್ಕದಲ್ಲ ಎಂಬುದಾಗಿ ಸ್ಪಷ್ಟನೆ.