LATEST NEWS
ತುರ್ತು ಪರಿಸ್ಥಿತಿಯಿಂದ ಜನರಿಗೆ ಸಾಕಷ್ಟು ಲಾಭವೇ ಆಗಿದೆ – ಮಾಜಿ ಸಚಿವ ರಮಾನಾಥ ರೈ

ಮಂಗಳೂರು ಜೂನ್ 27: ಮಾಜಿ ಪ್ರದಾನಿ ಇಂದಿರಾಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯಿಂದ ದೇಶದಲ್ಲಿ ಬಡವರಿಗೆ ಲಾಭವೇ ಆಗಿದ್ದು ತೊಂದರೆ ಆಗಿಲ್ಲ ಎಂದು , ಕೆಪಿಸಿಸಿ ಉಪಾಧ್ಯಕ್ಷರಾದ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಇಂದಿರಾ ಗಾಂಧಿ ಕಾಂಗ್ರೇಸ್ ಪಕ್ಷದ ಶ್ರೇಷ್ಠ ನಾಯಕಿ, ದುರ್ಬಲ ವರ್ಗದ ಜನರ ಪರವಾಗಿ ಕೆಲಸ ಮಾಡಿದವರು. ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ಹೇಳಿ ಇಂದು ವಿರೋಧ ಪಕ್ಷಗಳು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರನ್ನು ಅಪಹಾಸ್ಯ ಮಾಡುವ ಕ್ರಮ ಸರಿಯಲ್ಲ , ತುರ್ತು ಪರಿಸ್ಥಿತಿ ಹೇರಿದ್ದರಿಂದ ಬ್ಯಾಂಕ್ ರಾಷ್ಟ್ರೀಕರಣವಾಗಿದೆ, ಭೂ ಸುಧಾರಣಾ ಕ್ರಮ ಜಾರಿಗೆ ಬಂದಿದೆ , ಬಡವರ ನಿವೇಶನ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜನರಿಗೆ ಇದರಿಂದ ಸಾಕಷ್ಟು ಲಾಭ ಉಂಟಾಗಿದೆ. ಒಂದು ವೇಳೆ ಈ ಭಾಗದ ಜನರಿಗೆ ತುರ್ತು ಪರಿಸ್ಥಿತಿಯಿಂದ ಸಮಸ್ಯೆ ಉಂಟಾಗಿದ್ದರೆ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಈ ಭಾಗದಲ್ಲಿ ಗೆಲ್ಲುತ್ತಿರಲ್ಲಿಲ್ಲ. ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಬಡವರಿಗೆ, ಸಾಮಾನ್ಯರಿಗೆ ತುರ್ತು ಪರಿಸ್ಥಿತಿಯಿಂದ ಯಾವುದೇ ರೀತಿಯ ತೊಂದರೆ ಆಗದೆ, ಅಭಿವೃದ್ದಿ ಕಾರ್ಯಕ್ಕೆ ಇನ್ನಷ್ಟು ವೇಗ ಸಿಕ್ಕಿದೆ ಎಂದರು.

ಇಂದಿರಾ ಗಾಂಧಿಯವರ ಭೂ ಮಸೂದೆ ಕಾನೂನು ದ.ಕ. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ಬ್ಯಾಂಕ್ ಗಳ ರಾಷ್ಟ್ರೀಕರಣದಿಂದಲೂ ಲಾಭವಾಗಿದ್ದು, ಜಿಲ್ಲೆಯ ಜನರಿಗೆ, 20 ಅಂಶಗಳ ಕಾರ್ಯಕ್ರಮ, ನಿವೇಶನ, ದಖಾಸ್ತು ಭೂಮಿ ಹೀಗೆ ಬಡವರ ಸಬಲೀಕರಣದ ಕಾರ್ಯಕ್ರಮ ಇಂದಿರಾ ಗಾಂಧಿ ಕಾಲದಲ್ಲಿ ಆಗಿದೆ ದಕ್ಷಿಣ ಕನ್ನಡ ಜಿಲ್ಲೆಗೆ ಇಂದಿರಾ ಗಾಂಧಿಯವರ ಋಣ ಭಾರ ಇದೆ ಎಂದರು.