LATEST NEWS
ಅಪರೂಪದ ದೈವ ನರ್ತಕ ಗುಡ್ಡ ಪಾಣಾರಿಗೆ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ ಅಕ್ಟೋಬರ್ 31: ರಾಜ್ಯೋತ್ಸವ ಪ್ರಶಸ್ತಿ ಈ ಬಾರಿ ಅರ್ಹರನ್ನೆ ಹುಡುಕಿಕೊಂಡು ಬಂದಿದ್ದು, ಕರಾವಳಿಯ ಜಿಲ್ಲೆಯ ಅಪರೂಪದ ದೈವ ನರ್ತಕ ಕಾಪುವಿನ ಗುಡ್ಡ ಪಾಣಾರ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮುಖ್ಯವಾಹಿನಿಯಲ್ಲಿ ಇರದ ಈ ಜನಪದ ಪ್ರತಿಭೆಗೆ ಸೂಕ್ತ ಮನ್ನಣೆ ದೊರೆತಂತಾಗಿದೆ.
ಪಿಲಿಕೋಲದಲ್ಲಿ ದೈವ ನರ್ತಕ ರಾಗಿ ಸೇವೆ ಸಲ್ಲಿಸುತ್ತಿರುವ ಗುಡ್ಡ ಪಾಣರರಿಗೆ ಜಾನಪದ ವಿಭಾಗದಲ್ಲಿ ಈ ಮನ್ನಣೆ ದೊರಕಿದೆ. ಉಡುಪಿ ಜಿಲ್ಲೆಯ ಕಾಪು ಹಳೆ ಮಾರಿಗುಡಿ ಪರಿಸರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿಕೋಲ ತುಳುನಾಡಿನ ಭಕ್ತಿ, ಶೃದ್ದೆ, ನಂಬಿಕೆಗಳ ಆಗರವಾಗಿದೆ.

68 ವರ್ಷದ ಗುಡ್ಡ ಪಾಣಾರ ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಳೂರಿನವರು. ನಾಣು ಪಾಣಾರ ಮತ್ತು ರುಕ್ಕುಪಾಣಾರ್ತಿ ಎಂಬ ವರಪುತ್ರ. ತನ್ನ 25ನೇ ವಯಸ್ಸಿನಿಂದ ದೈವ ನರ್ತಕ ರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕಾಪುವಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ವಿಶಿಷ್ಟ ಪಿಲಿಕೋಲದಲ್ಲಿ ಪಿಲಿ ಪಾತ್ರಧಾರಿ ಆಗಿ ಜನರ ಗಮನ ಸೆಳೆದಿದ್ದಾರೆ. ಪಿಲಿಕೋಲವೆಂದರೆ ತುಳುನಾಡಿನ ಒಂದು ವಿಶಿಷ್ಟ ಆಚರಣೆ, ಮಾರಿಗುಡಿಯ ಆವರಣದಲ್ಲಿ ಸೇರಿರುವ ಜನರನ್ನು ಫಿಲಿ ಪಾತ್ರಧಾರಿಯಾಗಿ ಅಟ್ಟಾಡಿಸಿಕೊಂಡು ಹೋಗುತ್ತಾ ದೇವರ ಬಗೆಗಿನ ಶ್ರದ್ಧೆ ಹೆಚ್ಚಿಸುವ ರೀತಿಯಲ್ಲಿ , ಏಕಕಾಲದಲ್ಲಿ ಭಯ ಮತ್ತು ಭಕ್ತಿಯನ್ನು ಪ್ರೇರೇಪಿಸುವ ಆರಾಧನಾ ಪದ್ಧತಿಯಾಗಿದೆ. ಈ ಆಚರಣೆ ಅನೇಕ ಜನಪದ ನಂಬಿಕೆಗಳ ಆಗರವಾಗಿದೆ. ಗುಡ್ಡ ಪಾಣರ ಅವರಿಗೆ ಇಬ್ಬರು ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ. ಬಯಸದೆ ಅರಸಿಕೊಂಡು ಬಂದ ಪ್ರಶಸ್ತಿಯಿಂದ ಗುಡ್ಡಪಾಣರ ರೋಮಾಂಚನಗೊಂಡಿದ್ದಾರೆ.