LATEST NEWS
ತಪ್ಪಿದ ರೈಲ್ವೆಹಳಿ ಜಾಯಿಂಟ್ – ಕೊಂಕಣ್ ರೈಲ್ವೆ ಮಾರ್ಗದಲ್ಲಿ ಸಂಭಾವ್ಯ ರೈಲು ದುರಂತ ತಪ್ಪಿಸಿದ ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಉಡುಪಿ ಮೇ 27 : ಕೊಂಕಣ್ ರೈಲ್ವೆ ಹಳಿ ಮಾರ್ಗದಲ್ಲಿ ರೈಲು ಹಳಿಗಳ ಜಾಯಿಂಟ್ ತಪ್ಪಿದ ಬಗ್ಗೆ ಸಕಾಲದಲ್ಲಿ ಮಾಹಿತಿ ನೀಡಿದ ಜಾಗೃತ ಹಳಿ ನಿರ್ವಾಹಕ (ಟಿಎಂ) ಪ್ರದೀಪ್ ಶೆಟ್ಟಿ ಸಂಭಾವ್ಯ ರೈಲು ದುರಂತವನ್ನು ತಪ್ಪಿಸಿದ್ದಾರೆ.
ಮಧ್ಯರಾತ್ರಿ 2:25ರ ಸುಮಾರಿಗೆ ಕೊಂಕಣ ರೈಲು ಮಾರ್ಗದ ಇನ್ನಂಜೆ ಹಾಗೂ ಪಡುಬದ್ರಿ ನಡುವೆ ರೈಲ್ವೆ ಹಳಿಯಲ್ಲಿ ಹಳಿ ಜಾಯಿಂಟ್ ಜಾರಿರುವುದನ್ನು ಪತ್ತೆ ಹಚ್ಚಿ ತಕ್ಷಣ ಅದನ್ನು ಉಡುಪಿಯಲ್ಲಿದ್ದ ಮೇಲಾಧಿಕಾರಿಗಳ ಗಮನಕ್ಕೆ ತಂದರು. ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಸಿಬ್ಬಂದಿಗಳನ್ನು ಕಳುಹಿಸಿ ಹಳಿಯನ್ನು ದುರಸ್ಥಿ ಗೊಳಿಸಿದರು. ಇದಕ್ಕೆ ಮೂರು ಗಂಟೆ ತಗಲಿದ್ದು, ಈ ಮಧ್ಯೆ ಮಾರ್ಗದಲ್ಲಿ ಬಂದ ರೈಲುಗಳನ್ನು ಉಡುಪಿ ಹಾಗೂ ಸುರತ್ಕಲ್ ರೈಲು ನಿಲ್ದಾಣಗಳಲ್ಲಿ ತಡೆ ಹಿಡಿಯಲಾಯಿತು ಎಂದು ಕೊಂಕಣ ರೈಲ್ವೆಯ ಮಂಗಳೂರು ಪಿಆರ್ಓ ಸುಧಾ ಕೃಷ್ಣಮೂರ್ತಿ ತಿಳಿಸಿದರು.
ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಅವರು ಮಧ್ಯರಾತ್ರಿ ಕತ್ತಲಲ್ಲಿ ಹಳಿ ಜಾಯಿಂಟ್ ತಪ್ಪಿರುವುದನ್ನು ಪತ್ತೆ ಹಚ್ಚಿರುವುದಕ್ಕಾಗಿ ಕೊಂಕಣ ರೈಲ್ವೆಯ ನೂತನ ಸಿಎಂಡಿ ಸಂತೋಷಕುಮಾರ್ ಝಾ ಅವರು 25,000ರೂ.ನಗದು ಬಹುಮಾನ ಘೋಷಿಸಿದ್ದು, ಅದರಂತೆ ಉಡುಪಿಯ ಸೀನಿಯರ್ ಇಂಜಿನಿಯರ್ ಗೋಪಾಲಕೃಷ್ಣ ಅವರು ದುರಸ್ತಿ ಕೆಲಸ ನಡೆದ ಸ್ಥಳದಲ್ಲಿ ಪ್ರದೀಪ್ ಶೆಟ್ಟಿ ಅವರಿಗೆ ಚೆಕ್ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಡುಪಿಯ ಸೆಕ್ಷನ್ ಇಂಜಿನಿಯರ್ ಮೋಹನ್, ಸುರತ್ಕಲ್ ಸ್ಟೇಶನ್ನ ಸುಪರಿಂಟೆಂಡೆಂಟ್ ರವಿರಾಜ್ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
You must be logged in to post a comment Login